ಮಡಿಕೇರಿ ಮಾ.27 : ಜೋಡುಪಾಲ ಗೆಳೆಯರ ಬಳಗ ಹಾಗೂ ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಸಂಯುಕ್ತಾಶ್ರಯದಲ್ಲಿ ಮಾ.30 ರಂದು ಹೊನಲು ಬೆಳಕಿನ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿ “ಜೆಎಫ್ಸಿ ಟ್ರೋಫಿ ಸಿಜಾನ್-2” ನಡೆಯಲಿದೆ.
ಅಂದು ಸಂಜೆ 7 ಗಂಟೆಗೆ ಮದೆ ಗ್ರಾ.ಪಂ ವ್ಯಾಪ್ತಿಯ ಜೋಡುಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ.ರಮೇಶ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾಧ್ಯಕ್ಷ ಉತ್ತಪ್ಪ ಹೊಸೊಕ್ಲು ಕಬಡ್ಡಿ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.
ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಕೀಲರು ಹಾಗೂ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ದುಗ್ಗಳ, ಕಬಡ್ಡಿ ಪಂದ್ಯಾವಳಿಯ ಅಧ್ಯಕ್ಷ ಕೆ.ಆರ್.ರಾಜು, ಮದೆ ಗ್ರಾ.ಪಂ ಅಧ್ಯಕ್ಷ ನಡುಗಲ್ಲು ರಾಮಯ್ಯ, ಸದಸ್ಯರಾದ ಸಹೀದಲವಿ, ವಿಮಲಾಕ್ಷಿ, ಜೋಡುಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ದಮಯಂತಿ, ಎಸ್ಡಿಎಂಸಿ ಅಧ್ಯಕ್ಷ ಎ.ಬಿ.ಮಾಧವ ಪಾಲ್ಗೊಳ್ಳಲಿದ್ದಾರೆ.
ಪ್ರಥಮ ಬಹುಮಾನವಾಗಿ ದಾನಿಗಳಾದ ಕೆ.ಜೆ.ಆಶಾ ಹಾಗೂ ಸಂಜಯ್ ಕುಮಾರ್ ಅವರು ನೀಡಿರುವ ರೂ.23,333 ನಗದು ಮತ್ತು ಶಾಶ್ವತ ಫಲಕ, ದ್ವಿತೀಯ ಸಿಂಚನ ಕಾಫಿ ಲಿಂಕ್ಸ್ನ ಬಿ.ಸಿ.ಕೀರ್ತಿಕುಮಾರ್ ಹಾಗೂ ಸೀತಾರಾಮ್ ಕಳಗಿ ನೀಡಿರುವ ರೂ.15,555 ನಗದು ಹಾಗೂ ಶಾಶ್ವತ ಫಲಕ, ತೃತೀಯ ಮದೆಮಹೇಶ್ವರ ಲಿಂಕ್ಸ್ನ ಮಾಲೀಕರಾದ ಕೆ.ಟಿ.ಸತೀಶ್ ನೀಡಿರುವ ರೂ.10,111 ಹಾಗೂ ಶಾಶ್ವತ ಫಲಕ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಜೋಡುಪಾಲ ಮಾರುತಿ ಟ್ರಾನ್ಸ್ಫೋರ್ಟ್ನ ಮಾಲೀಕರಾದ ನಂಗಾರು ದೀಕ್ಷಿತ್ ನೀಡಿರುವ ರೂ. 7,777 ಹಾಗೂ ಶಾಶ್ವತ ಫಲಕವನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಅಲ್ಲದೆ ವೈಯಕ್ತಿಕ ಬೆಸ್ಟ್ ಡೆಫೆಂಡರ್, ಬೆಸ್ಟ್ ಆಲ್ರೌಂಡರ್, ಬೆಸ್ಟ್ ರೈಡರ್ ವಿಜೇತರಿಗೆ ಬಹುಮಾನವಾಗಿ 2ನೇ ಮೊಣ್ಣಂಗೇರಿಯ ಮನೋಜ್ ಮೈಕಲ್ ನೀಡಿದ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹಚ್ಚಹಸುರಿನ ಪಶ್ಚಿಮ ಘಟ್ಟದ ಸಾಲುಗಳ ನಡುವೆ ಹಾದು ಹೋಗುವ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಿಕೇರಿಯಿಂದ 14 ಕಿ.ಮೀ ದೂರದಲ್ಲಿ ರಸ್ತೆಯ ಎಡ ಮತ್ತು ಬಲ ಬದಿಯಲ್ಲಿ ಕಾಣ ಸಿಗುವ ಗ್ರಾಮಗಳೇ ಜೋಡುಪಾಲ ಮತ್ತು 2ನೇ ಮೊಣ್ಣಂಗೇರಿ ಗ್ರಾಮಗಳು.
ಪ್ರಕೃತಿಯ ಮಡಿಲಿನಲ್ಲಿ ನದಿ-ತೊರೆ, ಬೆಟ್ಟಗುಡ್ಡಗಳ ಮಧ್ಯೆ ಕೃಷಿ, ಮತ್ತಿತರ ಕೆಲಸಗಳ ನಡುವೆ ಜೀವನ ಸಾಗಿಸುತ್ತ ಆಧುನಿಕತೆಯ ಜಗತ್ತಿನತ್ತ ಮುನ್ನುಗ್ಗುತ್ತಿದ್ದ ಸಂದರ್ಭ, 2018 ನೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಜಲಸ್ಫೋಟ, ಭೂಕುಸಿತದ ಪರಿಣಾಮ ಸಾವು, ನೋವು ಉಂಟಾಗಿತ್ತು. ಮನೆ, ಆಸ್ತಿ ನಷ್ಟದಿಂದ ಗ್ರಾಮಸ್ಥರ ಚೈತನ್ಯ ಕುಂದಿತ್ತು.
ಇತ್ತೀಚಿನ ದಿನಗಳಲ್ಲಿ ಈ ಸಂಕಷ್ಟಗಳಿಂದ ಚೇತರಿಸಿಕೊಂಡ ಗ್ರಾಮಸ್ಥರು ಹಾಗೂ ಯುವಕರು ನವಗ್ರಾಮದ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಜೊತೆಗೆ ಯುವಕ, ಯುವತಿಯರಲ್ಲಿ ಹೊಸ ಉತ್ಸಾಹವನ್ನು ತುಂಬಲು 2022 ರಲ್ಲಿ ಜೋಡುಪಾಲದ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಆಯೋಜಿಸಿ ಯಶಸ್ವಿಯಾಗಿದೆ.
ಈ ಬಾರಿ 2ನೇ ವರ್ಷದ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲಾ ಕ್ರೀಡಾಭಿಮಾನಿಗಳು ಹಾಗೂ ಜೋಡುಪಾಲ ಶಾಲೆಯಲ್ಲಿ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಗಳು ಇದರ ಯಶಸ್ಸಿಗೆ ಸಹಕರಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9449402061 ನ್ನು ಸಂಪರ್ಕಿಸಬಹುದಾಗಿದೆ.









