ಮಡಿಕೇರಿ ಏ.3 : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ನಿವಾಸಿಗಳು ಚುನಾವಣೆ ಬಹಿಷ್ಕಾರದ ಬಿತ್ತಿಪತ್ರಗಳನ್ನು ಲಗತ್ತಿಸಿ ನಿವೇಶನ ಮತ್ತು ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕೇಂದ್ರದ ಬಳಿ ಆರಂಭಿಸಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಏಳನೇ ದಿನಕ್ಕೆ ಕಾಲಿರಿಸಿದೆ. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮತದಾನ ಮಾಡದೆ ಹೋರಾಟವನ್ನು ತೀವ್ರಗೊಳಿಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಪಾಲೇಮಾಡು ನಿವಾಸಿಗಳಿಗೆ ವಿತರಿಸಿದ ನಿವೇಶನದ ಹಕ್ಕು ಪತ್ರವನ್ನು ವಿಶೇಷ ಯೋಜನೆ ಎಂದು ಪರಿಗಣಿಸಿ ಲೋಪದೋಷಗಳನ್ನು ಸರಿಪಡಿಸಿ ಪ್ರತೀ ನಿವೇಶನ ರಹಿತ ಕುಟುಂಬಗಳಿಗೂ 40*50 ಜಾಗದ ಹಕ್ಕುಪತ್ರ ವಿತರಿಸಬೇಕೆಂದು ಒತ್ತಾಯಿಸಿದರು.
2005 ರಿಂದಲೂ ಸರ್ಕಾರಿ ಜಾಗದಲ್ಲಿ ಪ್ಲಾಸ್ಟಿಕ್ ಗುಡಿಸಲು ನಿರ್ಮಿಸಿಕೊಂಡು ತಮ್ಮ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿರುವ ಪಾಲೇಮಾಡು ನಿವಾಸಿಗಳು ತಮ್ಮ ಬದುಕಿಗಾಗಿ ಹೋರಾಟದಿಂದಲೇ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಧರಣಿ ನಿರತರು ಬೇಸರ ವ್ಯಕ್ತಪಡಿಸಿದರು.
ತಾತ್ಕಾಲಿಕ ವಾಸಕ್ಕಾಗಿ ನಿರ್ಮಿಸಿರುವ ಮನೆಗೆ 10*10 ವಿಸ್ತೀರ್ಣದ ಗುಡಿಸಲು ದಳಕ್ಕೆ ಹಕ್ಕುಪತ್ರ ವಿತರಿಸಲಾಗಿದೆ. ಇನ್ನುಳಿದ ಜಾಗಕ್ಕೆ 57ರ ನಮೂನೆಯಲ್ಲಿ ಸಲ್ಲಿಸಿರುವ ಅಕ್ರಮ ಸಕ್ರಮದಡಿ ಅರ್ಜಿ ತಿರಸ್ಕೃತವಾಗುತ್ತಿರುವುದು ಕಂಡು ಬಂದಿದೆ. ಇದು ಬಡವರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಪಾಲೇಮಾಡುವಿನ 260 ಕುಟುಂಬಗಳ ಸಾವಿರಕ್ಕೂ ಹೆಚ್ಚು ಮತದಾರರು ಚುನಾವಣೆ ಬಹಿಷ್ಕರಿಸುವುದಾಗಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು ಬಡವರ ಹೋರಾಟಕ್ಕೆ ಬೆಲೆಯೇ ಇಲ್ಲದಂತ್ತಾಗಿದೆ. ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದು ಜನರ ಬೇಡಿಕೆಗೆ ಸ್ಪಂದಿಸುವಂತಾಗಬೇಕು ಎಂದು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯ ಸರ್ಕಾರ ಉದ್ಯಮಿಗಳಿಗೆ ನೂರಾರು ಏಕರೆ ಸರಕಾರಿ ಜಾಗವನ್ನು ನೀಡುತ್ತಿದೆ. ಶ್ರೀಮಂತ ಭೂಮಾಲೀಕರಿಗೆ ಅವರ ಪಿತ್ರಾರ್ಜಿತ ಆಸ್ತಿ ಎಷ್ಟೇ ಇದ್ದರೂ, ಒತ್ತುವರಿ ಜಾಗವನ್ನು ಮೂವತ್ತು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿದೆ. ಬಡವರು ಕನಿಷ್ಟ ಸೂರಿಗಾಗಿ 94, 94ಸಿ ಯಡಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬಡವರಿಗೆ ಮತ್ತು ಉಳ್ಳುವರಿಗೊಂದು ನ್ಯಾಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಲತಾಯಿ ಧೋರಣೆ ಹೀಗೆ ಮುಂದುವರೆದರೆ ಯಾರೂ ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ನಿವಾಸಿಗಳು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲೇಮಾಡು ನಿವಾಸಿಗಳಾದ ಪಿ.ಎ.ಧನಂಜಯ, ಪಿ.ಬಿ.ರಾಜು, ಪಿ.ಸಿ.ಸುರೇಶ್, ಹೆಚ್.ಜೆ.ವೀಣಾ, ಎಂ.ಆರ್.ಶೋಭ ಹಾಗೂ ಕೆ.ಎ.ಅಲಿ ಉಪಸ್ಥಿತರಿದ್ದರು.









