ನಾಪೋಕ್ಲು ಏ.11 : ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ಉತ್ಸವದಲ್ಲಿ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಹಾಪೂಜೆ, ಧ್ವಜಾರೋಹಣ, ದೀಪಾರಾಧನೆ, ದೇವರ ಬಲಿಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು.
ದೇವಾಲಯದಲ್ಲಿ ಬೆಳಿಗ್ಗೆ ದರ್ಶ ಬಲಿ, ಮಹಾಭಿಷೇಕ, ಮತ್ತು ಮಧ್ಯಾಹ್ನ ಮಹಾಪೂಜೆ, ವಿಶೇಷ ಸೇವೆಗಳು ಜರುಗಿದವು. ದೇವರ ನೃತ್ಯಬಲಿ (ಪಟ್ಟಣಿ ) ನಂತರ ಪ್ರಸಾದ ವಿತರಣೆ ನೆರವೇರಿತು.
ಸಂಜೆ ಪಟ್ಟಣದಲ್ಲಿ ದೇವರ ಉತ್ಸವ ಮೂರ್ತಿಯನ್ನು ಚೆಂಡೆ, ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಾವೇರಿನದಿಯಲ್ಲಿ ಅವಭೃತಸ್ನಾನದ ಬಳಿಕ ದೇವರ ದರ್ಶನಬಲಿ ಜರುಗಿತು.
ನಂತರ ಶುದ್ಧ ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ದೇವಾಲಯದ ಮುಖ್ಯ ಅರ್ಚಕ ಸುಧೀರ, ರಮೇಶ್ ಶರ್ಮಾ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಸ್.ಮಂಜಯ್ಯ, ಕಾರ್ಯದರ್ಶಿ ಟಿ.ಎ.ಸುಜಿಕುಮಾರ್, ಖಜಾಂಚಿ ಎಂ.ಪಿ.ಗೋಪಾಲ, ಉಪಾಧ್ಯಕ್ಷ ಟಿ.ಆರ್.ಶ್ರೀನಿವಾಸ, ಕಾರ್ಯಾಧ್ಯಕ್ಷ ಟಿ.ಎನ್.ರಮೇಶ್, ಹಿರಿಯರಾದ ಶ್ರೀನಿವಾಸ, ಆನಂದ ಸ್ವಾಮಿ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.









