ಮಡಿಕೇರಿ ಏ.11 : ಸಸ್ಯಗಳ ಲೋಕ, ಪ್ರಾಕೃತಿಕ ಸೌಂದರ್ಯ ಒಳಗೊಂಡಿರುವ ರಾಜಸೀಟು ಉದ್ಯಾನವನದಲ್ಲಿ ಜಿಫ್ಲೈನ್ ಸಾಹಸ ಕ್ರೀಡೆಯು ಸೇರ್ಪಡೆಯಾಗಿದೆ.
ನಗರದ ರಾಜಸೀಟು ಉದ್ಯಾನವನದಲ್ಲಿ ಜಿಫ್ಲೈನ್ ಸಾಹಸ ಕ್ರೀಡೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಚಾಲನೆ ನೀಡಿದರು.
ಸ್ವತಃ ತಾವೇ ಜಿಫ್ಲೈನ್ನಲ್ಲಿ ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡು ಗಮನಸೆಳೆದರು. ಬಳಿಕ ಜಿಫ್ಲೈನ್ ಸಾಹಸ ಕ್ರೀಡೆಯ ಅನುಭವ ಹಂಚಿಕೊಂಡ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಒಟ್ಟು 310 ಮೀಟರ್ ಉದ್ದದ ಜಿಫ್ಲೈನ್ ಅಳವಡಿಸಲಾಗಿದೆ ಎಂದರು.
ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಸುರಕ್ಷತೆ ಸಂಬಂಧ ಪ್ರಮಾಣ ಪತ್ರ ಪಡೆಯಬೇಕು. ಜೊತೆಗೆ ಸಾಹಸ ಅಕಾಡೆಮಿಯ ಅಗತ್ಯ ಮಾರ್ಗದರ್ಶನ ಪಾಲಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ನಾಯಕ್ ಅವರು ಜಿಫ್ಲೈನ್ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಒಬ್ಬರಿಗೆ 300 ರೂ. ನಿಗದಿ ಮಾಡಲಾಗಿದೆ ಎಂದರು.
ಇಲಾಖಾ ಖಾಸಗಿ ಸಹಭಾಗಿತ್ವದಲ್ಲಿ ಜಿಪ್ಲೈನ್ ಸಾಹಸ ಕ್ರೀಡೆ ನಡೆಯಲಿದೆ. ಬೆಂಗಳೂರು ಸಂಸ್ಥೆಯವರು 5 ವರ್ಷದ ವರೆಗೆ ನಿರ್ವಹಿಸಲಿದ್ದಾರೆ ಎಂದು ಎಚ್.ಆರ್.ನಾಯಕ್ ಅವರು ಹೇಳಿದರು.
ಜಿಫ್ಲೈನ್ ಸಾಹಸ ಕ್ರೀಡೆಯ ಸುರಕ್ಷತೆ ಸಂಬಂಧಿಸಿದಂತೆ ನಿಧಿನ್ ಅವರು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ರಾಘವೇಂದ್ರ, ಪೊನ್ನಚ್ಚನ ಮಧು ಇತರರು ಇದ್ದರು.









