ಸುಂಟಿಕೊಪ್ಪ ಏ.12 : ರಕ್ತಕ್ಕೆ ಪರ್ಯಯವಾಗಿ ಯಾವುದು ಇಲ್ಲ. ರಕ್ತದಾನದಿಂದ ಆರೋಗ್ಯ ಮತ್ತು ಜೀವನವನ್ನು ಉಳಿಸಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರು ಮೂರು ತಿಂಗಳಿಗೊಮ್ಮೆ ರಕ್ತದಾನದಂತ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಇಂಡಿಯನ್ ರೆಡ್ ಕ್ರಾಸ್ ಸಭಾಪತಿ ರವೀಂದ್ರ ರೈ ಮನವಿ ಮಾಡಿದರು.
ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕೊಡಗು ಯೂತ್ ರೆಡ್ ಕ್ರಾಸ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ, ಮಡಿಕೇರಿ ರಕ್ತ ನಿಧಿ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ವಿವೇಕ ಜಾಗೃತ ಬಳಗ, ಉಡುಪಿ (ಡಿವೈನ್ ಪಾರ್ಕ್ ಟ್ರಸ್ಟ್) ನ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ರಕ್ತಕ್ಕೆ ಹೆಚ್ಚು ಬೇಡಿಕೆ ಇದೆ.
ಕೆಲವು ಸಂದರ್ಭಗಳಲ್ಲಿ ಓರ್ವ ರೋಗಿಗೆ 8 ರಿಂದ 10 ಲೀಟರ್ ರಕ್ತ ಬೇಕಾಗುತ್ತದೆ. ಇದು ರಕ್ತದಾನದ ಅವಶ್ಯಕತೆಯನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಘ ಸಂಸ್ಥೆಯ ಪದಾಧಿಕಾರಿಗಳು ಒಬ್ಬರಿಂದ ಒಬ್ಬರಿಗೆ ಜಾಗೃತಿಯನ್ನು ಮೂಡಿಸುತ್ತ ಯುವಜನತೆಯನ್ನು ಹೆಚ್ಚಾಗಿ ರಕ್ತದಾನ ಮಾಡುವಂತೆ ಪ್ರೇರಪಿಸಬೇಕೆಂದು ಕರೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತ ನಿಧಿ ಮುಖ್ಯಸ್ಥ ಡಾ.ಅನಿಲ್ ಕರುಂಬಯ್ಯ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಆಸಕ್ತರು ಒಂದು ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರಿಗೆ ರಕ್ತದಾನದ ಮಹತ್ವ ಮತ್ತು ಅಗತ್ಯತೆಯನ್ನು ಅರಿವು ಮೂಡಿಸುತ್ತ ಯಾರು ರಕ್ತದಾನ ಮಾಡಬಹುದು ಮತ್ತು ಯಾರು ಮಾಡಬಾರದು ಎಂಬ ಜಾಗೃತಿಯನ್ನು ಮೂಡಿಸುವುದು ಅಗತ್ಯ ಎಂದು ಕಿವಿಮಾತು ಹೇಳಿದರು.
ವರ್ಷಕ್ಕೆ ಕನಿಷ್ಠ 5 ರಿಂದ 6 ಕಾರ್ಯಕ್ರಮಗಳನ್ನು ರಕ್ತದಾನ ಶಿಬಿರಕ್ಕೆ ಒತ್ತು ಕೊಡುವಂತೆ ಅವರು ಮನವಿ ಮಾಡಿದರು.
ವೇದಿಕೆಯಲ್ಲಿ ಪದ್ಮವೇಣಿ, ಯೂತ್ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ದೇವ, ರಕ್ತ ನಿಧಿಯ ಮೇಲ್ವಿಚಾರಕರಾದ ದನಂಜಯ ರಕ್ತದಾನ ಮಹತ್ವದ ಕುರಿತು ಮಾತನಾಡಿದರು.
ಸುಮಾರು 42 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.









