ಮಡಿಕೇರಿ ಏ.12 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಡವ ಹೊಸ ವರ್ಷಾಚರಣೆ ಎಡ್ಮಾö್ಯರ್ ಪ್ರಯುಕ್ತ ಏ.14 ಮತ್ತು 15 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಹೊಸ ವರ್ಷವನ್ನು ಕಳೆದ 28 ವರ್ಷಗಳಿಂದ ಸಿಎನ್ಸಿ ಸಂಘಟನೆ ಸಾರ್ವಜನಿಕ ಕಾರ್ಯಕ್ರಮವಾಗಿ ನಡೆಸಿಕೊಂಡು ಬರುತ್ತಿದೆ. 29 ನೇ ಆಚರಣೆಯಾಗಿ ಏ.14 ರಂದು ಸಂಜೆ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ನಡೆಸಲಾಗುವುದು. ಆ ಮೂಲಕ ಕೊಡವ ಬುಡಕಟ್ಟು ಜನಾಂಗದ ಪರವಾದ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಹೇಳಿದ್ದಾರೆ.
ಏ.15 ರಂದು ಬೆಳಿಗ್ಗೆ ಬೆಟ್ಟತ್ತೂರು ಗ್ರಾಮದ ಕೂಪದಿರ ಮೋಹನ್ ಅವರ ಗದ್ದೆಯಲ್ಲಿ ಉಳುಮೆ ಕಾರ್ಯ ಮಾಡಿ ಭೂದೇವಿಗೆ ನಮಿಸಲಾಗುವುದು. ದೇವಟ್ ಪರಂಬುವಿನ ಕೊಡವ ನರಮೇಧದ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿ ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಆವರಣದಲ್ಲಿ ಹತ್ಯೆಗೀಡಾದ ಕೊಡವರ ಪರವಾಗಿ ಪ್ರಾರ್ಥಿಸಲಾಗುವುದು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವನ್ನು ಕೂಡ ಆಚರಿಸಲಾಗುವುದು ಎಂದು ನಾಚಪ್ಪ ತಿಳಿಸಿದ್ದಾರೆ.











