ಮಡಿಕೇರಿ ಏ.15 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಹೆಚ್.ಎಂ.ಸೋಮಪ್ಪ ಅವರು ಏ.17 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಅಂದು ಮಧ್ಯಾಹ್ನ 2 ಗಂಟೆಗೆ ಮಡಿಕೇರಿಯಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿರುವ ಅವರು ಕಡು ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ಸಮುದಾಯದ ಮಂದಿ ಜನಸಾಮಾನ್ಯ ಅಭ್ಯರ್ಥಿಯಾಗಿರುವ ನನಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರದ ಶಾಸನ ಸಭೆಗಳಿಗೆ ಆಯ್ಕೆಯಾಗುತ್ತಿರುವವರು ರೈತರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಜನಪರ ಹೋರಾಟದ ಭಾಗವಾಗಿ ಈ ಬಾರಿ ಸಿಪಿಐ ಸ್ಪರ್ಧೆಗಿಳಿದಿದೆ ಎಂದರು.
ಪಕ್ಷದಿಂದ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾದ ಹೋರಾಟಗಳನ್ನು ನಡೆಸಿಕೊಂಡು ಬರಲಾಗಿದೆ. ಸೂರಿಲ್ಲದವರಿಗಾಗಿ ಸೂರು ಒದಗಿಸುವ ನಿಟ್ಟಿನಲ್ಲಿ ‘ಸೂರಿಗಾಗಿ ಸಮರ’ ಎನ್ನುವ ಆಂದೋಲವನ್ನು ಪಕ್ಷ ರೂಪಿಸಿತ್ತು. ಜಿಲ್ಲೆಯಲ್ಲಿನ ವನ್ಯಜೀವಿ- ಮಾನವ ಸಂಘರ್ಷ, ದುಡಿಯುವ ವರ್ಗದ ಶೋಷಣೆ, ರೈತ ಸಮೂಹಕ್ಕೆ ನಡೆಯುತ್ತಿರುವ ಅನ್ಯಾಯ, ಕಾರ್ಮಿಕ ಸಮೂಹದ ಮೂಲಭೂತ ಬೇಡಿಕೆಗಳಿಗೆ ಸೂಕ್ತ ಸ್ಪಂದನ ದೊರಕಬೇಕಾಗಿದೆ. ಈ ಹಿನ್ನೆಲೆ ಚುನಾವಣಾ ಸ್ಪರ್ಧೆಗೆ ಇಳಿದಿದ್ದು, ಜನತೆ ಆಶೀರ್ವದಿಸಬೇಕೆಂದು ಸೋಮಪ್ಪ ಮನವಿ ಮಾಡಿದ್ದಾರೆ.










