ಸೋಮವಾರಪೇಟೆ ಏ.17 : ಹರಗ ಗ್ರಾಮದಲ್ಲಿ ಯಾವ ವ್ಯಕ್ತಿಗೂ ಬಹಿಷ್ಕಾರ ಹಾಕಿಲ್ಲ. ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹರಗ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎ.ಧರ್ಮಪ್ಪ ಹೇಳಿದರು.
ಗ್ರಾಮ ನಿವಾಸಿಯಾಗಿರುವ ಪಿ.ಡಿ.ಗಿರೀಶ್ ಎಂಬವರು, ಗ್ರಾಮಾಭಿವೃದ್ಧಿ ಮಂಡಳಿ ವಿರುದ್ಧ ಬಹಿಷ್ಕಾರದ ದೂರು ನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಉಪತಹಸೀಲ್ದಾರ್, ಬಿಸಿಎಂ ಅಧಿಕಾರಿ ಹಾಗು ಇನ್ನಿತರ ಅಧಿಕಾರಿಗಳು ಗ್ರಾಮಕ್ಕೆ ಬಂದು ಹೇಳಿಕೆ ಪಡೆದುಕೊಂಡು ಸಲಹೆ ನೀಡಿ ಹೋಗಿದ್ದಾರೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗ್ರಾಮದ ಪಿ.ಡಿ.ಗಿರೀಶ್ ಎಂಬವರು ಅರಣ್ಯ ಒತ್ತುವರಿ 6 ಎಕರೆ ಜಾಗದಲ್ಲಿ ಕಾಫಿ ತೋಟ ಮಾಡಿದ್ದರು. ಬೆಟ್ಟದಲ್ಲಿ ಯಂತ್ರದ ಮೂಲಕ ರಸ್ತೆ ಮಾಡಿದ್ದರು. ಇದನ್ನು ಗಮನಿಸಿದ ಅರಣ್ಯ ಇಲಾಖೆಯವರು ನೋಟಿಸ್ ನೀಡಿ, ಕಾಫಿ ಗಿಡಗಳನ್ನು ಕಿತ್ತು ತೆರವುಗೊಳಿಸಿದ್ದಾರೆ.
ಅರಣ್ಯ ಇಲಾಖೆಯವರಿಗೆ ಹರಗ ಗ್ರಾಮದವರು ಹೇಳಿ ತೆರವು ಮಾಡಿಸಿದ್ದಾರೆ ಎಂದು ಗಿರೀಶ್ ಸುಳ್ಳು ಆರೋಪ ಮಾಡಿ ಕಾಗಿನೆಲೆ ಚಾಮುಂಡೇಶ್ವರಿ ದೇವಾಲಯದಿಂದ 40 ಮಂದಿಗೆ ನೋಟೀಸು ಮಾಡಿಸಿದ್ದಾರೆ. ನೋಟೀಸು ಪಡೆದ 40 ಮಂದಿ ಗ್ರಾಮಸ್ಥರು ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ‘ನಾವು ಅರಣ್ಯ ಇಲಾಖೆಗೆ ಹೇಳಿ ಗಿರೀಶ್ ಅವರ ಕಾಫಿ ಗಿಡಗಳನ್ನು ಕೀಳಿಸಲಿಲ್ಲ’ ಎಂದು ಪ್ರಮಾಣ ಮಾಡಿದ್ದೇವೆ. ಆದರೆ ಗ್ರಾಮದವರೇ ಕೀಳಿಸಿದ್ದು ಎಂದು ಪಿ.ಡಿ.ಗಿರೀಶ್ ಪ್ರಮಾಣ ಮಾಡಲು ನಾವೆಲ್ಲರೂ ಆಗ್ರಹಿಸಿದರೂ, ಅವರು ಮಾಡಲಿಲ್ಲ. ವಿನಾಕಾರಣ ಕಾಗಿನೆಲೆ ತನಕ ಹೋಗಲು ಕಾರಣರಾದ ಗಿರೀಶ್ಗೆ ವಾಹನ ಬಾಡಿಗೆ ಭರಿಸುವಂತೆ ಗ್ರಾಮಸ್ಥರು ಕೇಳಿದಾಗ ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ಅವರೊಂದಿಗೆ ಮಾತು ಬಿಟ್ಟಿದ್ದಾರೆ. ಇದನ್ನೇ ಬಹಿಷ್ಕಾರ ಎಂದು ಮೇಲಾಧಿಕಾರಿಗಳಿಗೆ ದೂರು ನೀಡಿ, ಸುದ್ದಿಮಾಧ್ಯಮದಲ್ಲಿ ಬಿತ್ತರವಾಗುವಂತೆ ಮಾಡಿ, ಗ್ರಾಮಕ್ಕೆ ಕಳಂಕ ಬರುವಂತೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಹರಗ ಗ್ರಾಮಾಭಿವೃದ್ಧಿ ಮಂಡಳಿ ಗ್ರಾಮದ ರೈತಾಪಿ ವರ್ಗದವರ ಒಳಿತಿಗಾಗಿ ದುಡಿಯುತ್ತಿದೆ. ಮರಣನಿಧಿ ಸ್ಥಾಪಿಸಲಾಗಿದೆ. ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ, ಮನೆಯ ಶುಭಕಾರ್ಯಗಳಿಗೆ ಸಾಲಸೌಲಭ್ಯ ನೀಡಲಾಗುತ್ತದೆ. ಬಹಿಷ್ಕಾರದ ಆರೋಪ ಮಾಡಿರುವ ಗಿರೀಶ್ ಕೂಡ ಫಲಾನುಭವಿಯಾಗಿದ್ದಾರೆ. ಇಂತಹ ಆರೋಪಗಳನ್ನು ಯಾರು ಮಾಡಬಾರದು ಎಂದು ಹೇಳಿದರು.
ಗೋಷ್ಠಿಯಲ್ಲಿ ಮಂಡಳಿಯ ಉಪಾಧ್ಯಕ್ಷ ಎಚ್.ಕೆ.ತ್ರಿಶೂಲ್, ಕಾಯದರ್ಶಿ ಎಚ್.ಜೆ.ಶರತ್, ಗ್ರಾಮಸ್ಥರಾದ ರಮೇಶ್, ಸತೀಶ್ ಇದ್ದರು.











