ಸೋಮವಾರಪೇಟೆ ಜೂ.14 : ಕಳೆದ 9 ವರ್ಷಗಳ ಹಿಂದೆ ಭೂಮಿಪೂಜೆ ನೆರವೇರಿ ಇಂದಿಗೂ ಮುಕ್ತಾಯಗೊಳ್ಳದ ಸೋಮವಾರಪೇಟೆ ಟರ್ಫ್ ಹಾಕಿ ಮೈದಾನವನ್ನು ಶಾಸಕ ಮಂತರ್ ಗೌಡ ಅವರು ಪರಿಶೀಲಿಸಿ, ತಕ್ಷಣ ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಕ್ರೀಡಾಪಟುಗಳ ಉಪಯೋಗಕ್ಕೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಿದರು.
ಟರ್ಫ್ ಕಾಮಗಾರಿಯನ್ನು ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕೇಂದ್ರ ಕಚೇರಿಯೇ ನಿರ್ವಹಿಸುತ್ತಿದ್ದು, ಗುತ್ತಿಗೆ ಪಡೆದ ಕಂಪೆನಿಯವರು ಈವರೆಗೆ ಮೈದಾನವನ್ನು ಇಲಾಖೆಗೆ ಹಸ್ತಾಂತರಿಸಿಲ್ಲ. ಇದರೊಂದಿಗೆ ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ ಎಂದು ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ವಿಸ್ಮಯ ಅವರು ಶಾಸಕರ ಗಮನಕ್ಕೆ ತಂದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೈದಾನದ ಪ್ರಗತಿ ಕುಂಠಿತವಾಗಿದೆ. ಟೆಂಡರ್ ಪಡೆದ ಗುತ್ತಿಗೆದಾರ ಕಂಪೆನಿಯವರು ಬಿಲ್ ಮಾಡಿಕೊಂಡಿದ್ದು, ಕಾಮಗಾರಿಯನ್ನು ಮುಕ್ತಾಯಗೊಳಿಸಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ ಎಂದು ಮೈದಾನ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಡಾ. ಮಂತರ್ ಗೌಡ, ಕೂಡಲೇ ಮೈದಾನಕ್ಕೆ ಅಗತ್ಯವಿರುವ ವಿದ್ಯುತ್ ಹಾಗೂ ನೀರಿನ ಸೌಕರ್ಯ ಕಲ್ಪಿಸಬೇಕು. ವಿದ್ಯುತ್ ಸಂಪರ್ಕಕ್ಕೆ ಸೆಸ್ಕ್ ಗೆ ಸೂಚನೆ ನೀಡಬೇಕು. ಮೈದಾನವನ್ನು ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಬೇಕೆಂದು ಇಲಾಖಾಧಿಕಾರಿಗೆ ನಿರ್ದೇಶನ ನೀಡಿದರು. ಮೈದಾನದ ಸುತ್ತಮುತ್ತ ಇರುವ ಜಾಗದಲ್ಲಿ ಕ್ರೀಡಾಪಟುಗಳಿಗೆ ನೆರವಾಗುವಂತೆ ವಾಲಿಬಾಲ್ ಆಟದ ಮೈದಾನ, ಸ್ಕೇಟಿಂಗ್ ತರಬೇತಿ ಕೇಂದ್ರ ನಿರ್ಮಿಸಲು ಕ್ರಮವಹಿಸಬೇಕು. ಇಲಾಖೆಯಿಂದ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿ ವಿಸ್ಮಯ ಅವರಿಗೆ ಸೂಚಿಸಿದರು.
ಈ ಸಂದರ್ಭ ಕ್ರೀಡಾ ತರಬೇತುದಾರ ವೆಂಕಟೇಶ್, ಮೈದಾನ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಬಿ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.










