ಮಡಿಕೇರಿ ಜೂ.15 : ಸರ್ಕಾರಿ ದಾಖಲೆಗಳಲ್ಲಿ ಕೊಡವರನ್ನು ಕೊಡಗರು ಎನ್ನುವ ಬದಲಿಗೆ ಕೊಡವರು ಎಂದು ನಮೂದಿಸಲು ಅಧಿಕೃತ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದೆ.
ಬೆಂಗಳೂರಿಗೆ ತೆರಳಿದ ಸಿಎನ್ಸಿ ನಿಯೋಗ ಕೊಡವರು ಪದ ಬಳಕೆಯ ಕುರಿತು ಹೈಕೋರ್ಟ್ ಆದೇಶವನ್ನು ಗೆಜೆಟ್ ಅಧಿಸೂಚನೆಯ ಮೂಲಕ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿತು.
2010 ಜೂನ್ ತಿಂಗಳಿನಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದ ಪರಿಣಾಮ ಆಯೋಗವು ಕಾಗುಣಿತ ದೋಷ ತಿದ್ದುಪಡಿಗೆ ಶಿಫಾರಸ್ಸು ಮಾಡಿತು. ಕೊಡಗರ ಬದಲಿಗೆ ಕೊಡವ/ಕೊಡವರು ಎಂದು ನಮೂದಿಸುವ ಕುರಿತು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು. ಆದರೆ ಸರ್ಕಾರ ವರದಿಯನ್ನು ಜಾರಿಗೊಳಿಸಲಿಲ್ಲ ಮತ್ತು ಯಾವುದೇ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಿಲ್ಲ. ಈ ಕಾರಣದಿಂದ ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ಕೋರ್ಟ್ ಕೂಡ ಕೊಡವ ಪದ ಬಳಕೆ ಕುರಿತು ಆದೇಶ ಹೊರಡಿಸಿತು. ಆದರೆ ಅಧಿಕಾರಿಶಾಹಿಗಳು ನ್ಯಾಯಾಲಯದ ಆದೇಶವನ್ನು ಕೂಡ ಪಾಲಿಸಲಿಲ್ಲವೆಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಗಮನ ಸೆಳೆದರು.
ಹೈಕೋರ್ಟ್ನ ತೀರ್ಪಿನಂತೆ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತದೆ ಎನ್ನುವ ನಮ್ಮ ನಿರೀಕ್ಷೆ ಹುಸಿಯಾಗಿದೆ. ಆದ್ದರಿಂದ ಕೊಡವ ಪದ ಬಳಕೆಗೆ ಸಂಬಂಧಿಸಿದಂತೆ 2021 ಡಿ.8 ರಂದು ನೀಡಲಾದ ಕರ್ನಾಟಕದ ಉಚ್ಚ ನ್ಯಾಯಾಲಯದ ಅಂತಿಮ ತೀರ್ಪನ್ನು ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಬೇಕು ಎಂದು ಅವರು ಮನವಿ ಮಾಡಿದರು.
ಮನವಿ ಪತ್ರವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಲ್ಲಿಸಿದರು.
ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಪಟ್ಟಮಾಡ ಕುಶ, ಪಟ್ಟಡ ರಂಜನ್, ಅಜ್ಜಿಕುಟೀರ ಲೋಕೇಶ್, ಜಮ್ಮಡ ಮೋಹನ್, ಚಂಬಂಡ ಜನತ್, ಅರೆಯಡ ಗಿರೀಶ್, ಕಾಂಡೆರ ಸುರೇಶ್, ಪಾರ್ವಂಗಡ ನವೀನ್, ಆಲಮಂಡ ಜೈ, ಪಟ್ಟಮಾಡ ಅಶೋಕ್, ಬೇಪಡಿಯಂಡ ದಿನು, ಕಿರಿಯಮಾಡ ಶರೀನ್, ಕಿರಿಯಮಾಡ ಶಾನ್ ಮತ್ತಿತರರು ನಿಯೋಗದಲ್ಲಿದ್ದರು.










