ಮಡಿಕೇರಿ ಜೂ.24 : ಅನಂತರಾಜ ಗೌಡ ರಚಿತ ವೀರಲೋಕ ಪ್ರಕಾಶನದ ’10 ಕುಟುಂಬ 18 ಗೋತ್ರದ ಗೌಡ ಪರಂಪರೆ’ಯು ಪುಸ್ತಕ ಬೆಂಗಳೂರಿನ ರಮಣಶ್ರೀ ಹೊಟೇಲ್ ಸಭಾಂಗಣದಲ್ಲಿ ಲೋಕಾರ್ಪಣೆಯಾಯಿತು.
’10 ಕುಟುಂಬ 18 ಗೋತ್ರದ ಗೌಡ ಪರಂಪರೆ’ಯು ಒಂದು ಸಮುದಾಯದ ಸಂಶೋಧನಾತ್ಮಕ, ಚಾರಿತ್ರಿಕ, ಸಾಂಸ್ಕøತಿಕ ಮತ್ತು ಪರಂಪರೆಯ ಅಧ್ಯಯನವಾಗಿದೆ. ಲೇಖಕರ ದೀರ್ಘವಾದ ಕ್ಷೇತ್ರ ಶೋಧನೆಯಿಂದ, ಹಲವು ಹಿರಿಯರು, ಗಣ್ಯರೊಂದಿಗೆ ದಾಖಲಿತ ಸಂಭಾಷಣೆ ಮತ್ತು ಅನೇಕ ಗ್ರಂಥಗಳ ಆಧಾರದಿಂದ ಹಾಗೂ ಡಾ.ಹಾ.ತಿ.ಕೃಷ್ಣೇಗೌಡರ ಮಾರ್ಗದರ್ಶನದಿಂದ ಈ ಕೃತಿಯು ಒಂದು ಶೈಕ್ಷಣಿಕ ರೂಪದವನ್ನು ಪಡೆದಿದೆ ಎಂದು ಲೇಖಕ ಅನಂತರಾಜ ಗೌಡ ತಿಳಿಸಿದ್ದಾರೆ.
ಕೃತಿ ಬಿಡುಗಡೆಯ ಸಮಾರಂಭದಲ್ಲಿ ಡಾ.ಹಾ.ತಿ.ಕೃಷ್ಣೇಗೌಡರು ಕೃತಿ ಪರಿಚಯ ಮಾಡಿದರು. ಅನಂತರಾಜ ಗೌಡರವರ ಕಿರು ಪರಿಚಯ ಮತ್ತು ಅವರ ಕೃತಿ ಪರಿಚಯಿಸುವ ಸಾಕ್ಷ್ಯಚಿತ್ರವನ್ನು ವೇದಿಕೆಯ ಎಲ್ಇಡಿ ಪರದಿಯಲ್ಲಿ ಪ್ರದರ್ಶಿಸಲಾಯಿತು.
ರಾಜ್ಯಸಭಾ ಸದಸ್ಯ ಡಾ.ಜಿ.ಸಿ.ಚಂದ್ರಶೇಖರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯರು ಡಾ.ಸಿ.ಎನ್.ಮಂಜುನಾಥ, ಕಿರುತರೆ ನಿರ್ದೇಶಕ ಟಿ.ಎನ್.ಸೀತಾರಾಮ್, ಪ್ರಜಾವಾಣಿಯ ಪ್ರಧಾನ ಸಂಪಾದಕರಾದ ರವೀಂದ್ರ ಭಟ್, ಪತ್ರಕರ್ತ ಜೋಗಿ, ಜಿ.ಎನ್. ಮೋಹನ ಸೇರಿದಂತೆ ನಾಡಿನ ಹೆಸರಾಂತ ಲೇಖಕರು, ಪ್ರಕಾಶಕರು, ಹಿನ್ನೆಲೆ ಗಾಯಕಿಯರು ಹಾಜರಿದ್ದರು.









