ಮಡಿಕೇರಿ ಜು.9 : ನಾವು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ನಮ್ಮ ಸುತ್ತಲಿನ ಪರಿಸರದಲ್ಲಿ ಹೆಚ್ಚೆಚ್ಚು ಗಿಡ- ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಸಂರಕ್ಷಣೆಯೊಂದಿಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗೆ ಸಂಕಲ್ಪ ತೊಡಬೇಕು ಎಂದು ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಸತೀಶ್ ಮನವಿ ಮಾಡಿದರು.
ಕರ್ನಾಟಕ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ಕಾವೇರಿ ಪರಿಸರ ಬಳಗ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ, ಕಾಲೇಜಿನ ಎನ್.ಎಸ್.ಎಸ್.ಘಟಕ ಹಾಗೂ ಸುಂಟಿಕೊಪ್ಪ ಜೆ.ಸಿ.ಐ.ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಕುಶಾಲನಗರ ಸರ್ಕಾರಿ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ “ನಮ್ಮ ನಡೆ ಹಸಿರೆಡೆಗೆ'( ಗ್ರೋ ಗ್ರೀನ್ ) ಹಾಗೂ ‘ನನ್ನ ಗಿಡ ನನ್ನ ಹೆಮ್ಮೆ’ ಅಂಗವಾಗಿ ಏರ್ಪಡಿಸಿದ್ದ ವನ ಮಹೋತ್ಸವ ಸಪ್ತಾಹ :2023 ರ ಅಂಗವಾಗಿ 250 ಅರಣ್ಯ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಭೂಮಂಡಲದಲ್ಲಿ ಭೂಮಿಯ ಮೇಲಿನ ನೀರು ಕಡಿಮೆಯಾಗುತ್ತಿದೆ. ಸಮುದ್ರ ಮಟ್ಟ ಹೆಚ್ಚಾಗುತ್ತಿದೆ. ಆದ್ದರಿಂದ ಮಾನವ ಸಂಕುಲದ ಜೊತೆಗೆ ಅರಣ್ಯ ಮತ್ತು ವನ್ಯ ಸಂಪತ್ತನ್ನು ಉಳಿಸಿ ಬೆಳೆಸುವಂತಾಗಲು ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಪರಿಸರ ಸಂರಕ್ಷಣೆಗೆ ಹಿಂದಿಗಿಂತ ಇಂದು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ನಮ್ಮ ಪೂರ್ವಿಕರು ದೂರದೃಷ್ಠಿಯಿಂದ ಬೆಳೆಸಿರುವ ಗಿಡ- ಮರಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಡಾ.ಸತೀಶ್ ಹೇಳಿದರು.
ಪರಿಸರವನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದ್ದು, ತಮ್ಮ ಕಾಲೇಜು ಆವರಣದಲ್ಲಿ ಕೈಗೊಂಡಿರುವ ಹಸರೀಕರಣ ಕಾರ್ಯಕ್ಕೆ
ಎಲ್ಲರ ಸಹಕರಿಸಬೇಕು ಎಂದು ಪ್ರಾಂಶುಪಾಲ ಡಾ ಸತೀಶ್ ಮನವಿ ಮಾಡಿದರು.
“ಪರಿಸರ ಸಂರಕ್ಷಣೆ” ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿ ಮಾತನಾಡಿದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ಮಾತನಾಡಿ, ‘ಪ್ರತಿವರ್ಷ ನಾನಾ ಧ್ಯೇಯವಾಕ್ಯದೊಂದಿಗೆ ವನ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಬಾರಿ “ನನ್ನ ಗಿಡ ನನ್ನ ಹೆಮ್ಮೆ” ಧ್ಯೇಯವಾಕ್ಯದೊಂದಿಗೆ ಸಸಿ ನೆಡುವ ಸಪ್ತಾಹ ಆಚರಿಸಲಾಗುತ್ತಿದ್ದು, ಇಂತಹ ಹಸಿರು ನಿರ್ಮಾಣ ಅಭಿಯಾನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಮಾತನಾಡಿ, ಅರಣ್ಯ ಇಲಾಖೆಯ ವತಿಯಿಂದ ನಾಗರಿಕರ ಸಹಭಾಗಿತ್ವದಲ್ಲಿ ಶಾಲಾ- ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 2500 ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಕಾವೇರಿ ಪರಿಸರ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಪರಿಸರ ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲರೂ ಜತೆಗೂಡಿ ಹಸಿರು ಹೊದಿಕೆ ನಿರ್ಮಾಣಕ್ಕೆ ಪಣ ತೊಡಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್, ಕಾಲೇಜಿನ ಡಾ ಎಲೆಕ್ಟ್ರಾನಿಕಗಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಮುಖ್ಯಸ್ಥ ಡಾ ಚೂಡಾ ರತ್ನಾಕರ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪರಶಿವಮೂರ್ತಿ, ಉಪನ್ಯಾಸಕರಾದ ಮಹೇಂದ್ರ, ಮಂಜುನಾಥ್, ಕಛೇರಿ ಅಧೀಕ್ಷಕಿ ಎಚ್.ಎ.ರೂಪ, ಡಿ ಆರ್ ಎಫ್ ಓ ಕೆ.ಎನ್.ದೇವಯ್ಯ, ಶ್ರವಣಕುಮಾರ್ ವಿಭೂತಿ, ಚೇತನ್, ಗಸ್ತು ವನ ಪಾಲಕ ವಿ.ಎಸ್. ಮಂಜೇಗೌಡ, ಸಿದ್ದರಾಮ ನಾಟೀಕರ್, ದಿನೇಶ್, ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು, ಅರಣ್ಯ ವೀಕ್ಷಕರು ಹಾಗೂ ಸಿಬ್ಬಂದಿ ಇದ್ದರು.











