ಮಡಿಕೇರಿ ಜು.10 : ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿರುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಮಡಿಕೇರಿಯ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ನಗರದಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಚೆಸ್ಕಾಂ ನಿಗಮದ ವಿರುದ್ಧ ಘೋಷಣೆಯನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಏಕಾಏಕಿ ವಿದ್ಯುತ್ ಬಿಲ್ ಏರಿಕೆ ಮಾಡುವ ಮೂಲಕ ನಷ್ಟದಲ್ಲಿರುವ ರೈತರು ಮತ್ತು ಬೆಳೆಗಾರರ ನೋವಿನ ಮೇಲೆ ಬರೆ ಎಳೆಯಲಾಗುತ್ತಿದೆ. ತಕ್ಷಣವೇ ವಿದ್ಯುತ್ ಬಿಲ್ ಅನ್ನು ಇಳಿಕೆ ಮಾಡಬೇಕು. ಈ ಸಮಸ್ಯೆ ನಿವಾರಣೆಗೆ ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲೆಯಲ್ಲಿ ನಿರಂತರವಾಗಿ ವಿದ್ಯುಚ್ಚಕ್ತಿ ಸಮಸ್ಯೆ ತಲೆದೋರಿದೆ. ಕಳೆದ 20 ವರ್ಷಗಳಿಂದ ಎದುರಾಗಿರುವ ಸಮಸ್ಯೆಗೆ ಇಂದಿಗೂ ಪರಿಹಾರ ದೊರೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೋಟಗಳಲ್ಲಿ ಜಂಗಲ್ ಕ್ಲಿಯರಿಂಗ್ ಮಾಡದೇ ಇರುವುದರಿಂದ ಮರದ ಕೊಂಬೆಗಳು ವಿದ್ಯುತ್ ಲೈನ್ಗೆ ತಗಲುತ್ತಿವೆ. ಅದರಲ್ಲೂ ದಕ್ಷಿಣ ಕೊಡಗು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಜಂಗಲ್ ಕ್ಲಿಯರಿಂಗ್ ಮಾಡದೇ ಇರುವುದರಿಂದ ವೋಲ್ಟೇಜ್ ಸಮಸ್ಯೆ ತಲೆದೋರಿದೆ. ಈ ಕುರಿತು ಚೆಸ್ಕಾಂ ಇಲಾಖಾಧಿಕಾರಿಗೆ ಮಾಹಿತಿ ನೀಡಿದರೂ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ, ತಿಂಗಳಿಗೆ ಬರುತ್ತಿರುವ ವಿದ್ಯುತ್ ಬಿಲ್ ನೋಡಿದರೆ ನಡುಕ ಹುಟ್ಟುತ್ತದೆ. ಕೆ.ಇ.ಆರ್.ಸಿ ಆ ಮಟ್ಟಿಗೆ ಬಿಲ್ ಏರಿಕೆ ಮಾಡಿದೆ. ಅದರಲ್ಲೂ ಗುಣಮಟ್ಟದ ವಿದ್ಯುತ್ ಮಾತ್ರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಸಂಘದ ಪ್ರಧಾನ ಸಂಚಾಲಕ ಸುಭಾಸ್ ಸುಬ್ಬಯ್ಯ, ಖಜಾಂಚಿ ಇಟ್ಟೀರ ಸಬೀತ, ಕಾನೂನು ಸಲಹೆಗಾರರಾದ ಹೇಮಚಂದ್ರ, ವಿರಾಜಪೇಟೆ ತಾಲೂಕು ಅಧ್ಯಕ್ಷ ಭವಿ ಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಂಬ ಕಾರ್ಯಪ್ಪ ಸೇರಿದಂತೆ ಐದು ತಾಲೂಕುಗಳ ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









