ಮಡಿಕೇರಿ ಜು.19 : ನಗರಸಭಾ ಸದಸ್ಯ ಕಾಳಚಂಡ ಅಪ್ಪಣ್ಣ ಅವರ ಮೇಲೆ ಐಟಿಐ ಜಂಕ್ಷನ್ ಬಳಿ ನಡೆದಿರುವ ಹಲ್ಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಎಸ್ಆರ್ವಿಕೆಎಲ್ ಫೇರ್ ಅಸೋಸಿಯೇಷನ್ ತಿಳಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ, ನಗರಸಭಾ ಸದಸ್ಯರಾಗಿರುವ ಕಾಳಚಂಡ ಅಪ್ಪಣ್ಣ ಅವರು ನಮ್ಮ ವೆಲ್ ಫೇರ್ ಅಸೋಸಿಯೇಷನ್ ಸದಸ್ಯರೂ ಆಗಿದ್ದಾರೆ. ಜಾಗದ ದಾಖಲೆಗಳಿಗೆ ಸಂಬಂಧಿಸಿದಂತೆ ಇವರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ದಾಖಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಅಥವಾ ಉಪ ವಿಭಾಗಾಧಿಕಾರಿಗಳಿಗೆ ದೂರನ್ನು ನೀಡಬಹುದಿತ್ತು. ಆದರೆ, ನಗರಸಭಾ ಸದಸ್ಯನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವೆಂದರು.
ಇತ್ತೀಚೆಗೆ ಐಟಿಐ ಜಂಕ್ಷನ್ ಬಳಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆಯೂ ಪೊಲೀಸ್ ಇಲಾಖೆಯ ಗಮನವನ್ನು ಅಸೋಸಿಯೇಷನ್ ಸೆಳೆದಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಸೋಸಿಯೇಷನ್ ಸದಸ್ಯ, ಸುಬ್ರಮಣ್ಯ ನಗರದ ನಿವಾಸಿ ಹುದೇರಿ ನಾಗೇಶ್ ಮಾತನಾಡಿ, ಐಟಿಐ ಜಂಕ್ಷನ್ ಬಳಿ ಬೆಳಗ್ಗೆ ಮತ್ತು ಸಂಜೆ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಇಂತಹ ಕೇಂದ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆ ಅಲ್ಲಿಗೆ ಸೂಕ್ತ ಪೋಲಿಸ್ ಬೀಟ್ ಹಾಕಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಸದಸ್ಯರುಗಳಾದ ನಾಟೋಳಂಡ ಪ್ರಕಾಶ್, ಬೊಪ್ಪಂಡ ಸರಳ, ಮಲಚ್ಚೀರ ಕಾರ್ಯಪ್ಪ ಹಾಗೂ ಬೊಮ್ಮಂಡ ಗಣೇಶ್ ಉಪಸ್ಥಿತರಿದ್ದರು.







