
ಮಡಿಕೇರಿ NEWS DESK ಮಾ.10 : ಕರ್ನಾಟಕ ಸುವರ್ಣ ಸಮುಚ್ಚಯ ಭವನದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕೊಡವ ಪಾರಂಪರಿಕ ಕೇಂದ್ರ(ಕೊಡವ ಹೆರಿಟೇಜ್ ಸೆಂಟರ್) ಹಾಗೂ ಕರ್ನಾಟಕ ಸುವರ್ಣ ಸಮುಚ್ಚಯ ಭವನ ಕಟ್ಟಡ ಕಾಮಗಾರಿಯನ್ನು ಜಿಲ್ಲಾಧಿಕಾರಿ ಮಂಗಳವಾರ ಪರಿಶೀಲಿಸಿದರು. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಬಾಕಿ ಇರುವ 1.40 ಕೋಟಿ ರೂ. ಬಿಡುಗಡೆಯಾಗಲಿದ್ದು, ತ್ವರಿತವಾಗಿ ಕರ್ನಾಟಕ ಸುವರ್ಣ ಸಮುಚ್ಚಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗೆ ಸೂಚಿಸಿದರು. ಕರ್ನಾಟಕ ಸುವರ್ಣ ಸಮುಚ್ಚಯ ಭವನದ ಕಾಮಗಾರಿ ಬಹಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು, ಆದರೆ ಈಗಲಾದರೂ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಕರ್ನಾಟಕ ಸುವರ್ಣ ಸಮುಚ್ಚಯ ಭವನದಲ್ಲಿ ಕಲಾಮಂದಿರ, ಕಲಾ ಗ್ಯಾಲರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷೆ ಸಾಹಿತ್ಯ ಅಕಾಡೆಮಿ ಕಚೇರಿಗಳು ಕರ್ನಾಟಕ ಸುವರ್ಣ ಸಮುಚ್ಚಯ ಭವನಕ್ಕೆ ಸ್ಥಳಾಂತರವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕÀ ಕುಮಾರ ಮಾಹಿತಿ ನೀಡಿದರು. ಕೊಡವ ಹೆರಿಟೇಜ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಅವರು ಯಾವುದೇ ಕಾಮಗಾರಿಯನ್ನು ಕಟ್ಟಡದ ಒಳಾಂಗಣ ಹಾಗೂ ಹೊರಾಂಗಣ ಅಭಿವೃದ್ಧಿ ಸೇರಿದಂತೆ ಎಲ್ಲವನ್ನೂ ಒಂದೇ ಬಾರಿ ಅಂದಾಜು ಪಟ್ಟಿ ಸಲ್ಲಿಸಿ ಹಣ ಬಿಡುಗಡೆ ಮಾಡಿಸಿಕೊಳ್ಳಬೇಕು ಎಂದರು. ಐನ್ಮನೆ ಮಾದರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ನ್ನು ನಿರ್ಮಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಐನ್ಮನೆಯು ಪೂಜ್ಯ ಸ್ಥಾನವನ್ನು ಹೊಂದಿದೆ. ಕೊಡವ ಸಂಸ್ಕೃತಿ ಮತ್ತು ಪರಂಪರೆಯ ಚಟುವಟಿಕೆಗಳನ್ನು ನಡೆಸಲು ಕೊಡವ ಹೆರಿಟೇಜ್ ಸೆಂಟರ್ ಸಹಕಾರಿಯಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಕೆ.ಟಿ.ಪ್ರಭು ಅವರು ಮಾಹಿತಿ ನೀಡಿದರು. ಕೊಡವ ಹೆರಿಟೇಜ್ ಸೆಂಟರ್ ಮ್ಯೂಸಿಯಂ ಸಹ ಒಳಗೊಂಡಿದೆ. ಮೊದಲ ಹಂತದಲ್ಲಿ 3 ಕೋಟಿ ರೂ. ಬಿಡುಗಡೆಯಾಗಿತ್ತು. ಈಗ 4.95 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಇಇ ಅವರು ತಿಳಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್, ಸತೀಶ, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ಇತರರು ಇದ್ದರು.









