ಮಡಿಕೇರಿ ಆ.11 : ಟಿಪ್ಪು ಕಾಲದಲ್ಲಿ ಕೊಡವರ ಹತ್ಯೆಯಾದ ದೇವಟ್ ಪರಂಬು ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ದೇವಟ್ ಪರಂಬುವಿಗೆ ತೆರಳಿದ ಪ್ರಮುಖರು ಕುತಂತ್ರದಿಂದ ಜೀವ ಕಳೆದುಕೊಂಡ ಹಿರಿಯರಿಗೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ನಾಚಪ್ಪ ಅವರು ಸಿಎನ್ಸಿಯ ನಿರಂತರ ಹೋರಾಟದ ಫಲವಾಗಿ ಪ್ರಮುಖ ಹಕ್ಕೊತ್ತಾಯಗಳಿಗೆ ಹಂತ ಹಂತವಾಗಿ ಸ್ಪಂದನೆ ದೊರೆಯುತ್ತಿದೆ. ಅರಸರ ಸಂಚಿನಿಂದ ಮೃತಪಟ್ಟ ಅಮಾಯಕ ಹಿರಿಯರ ಆಶೀರ್ವಾದ ಪಡೆದು ಶಾಂತಿಯುತ ಹೋರಾಟವನ್ನು ಮುಂದುವರೆಸಲು ಪುಷ್ಪನಮನದ ಮೂಲಕ ಸಂಕಲ್ಪ ತೊಟ್ಟಿರುವುದಾಗಿ ಹೇಳಿದರು.
1785 ರ ಡಿ.12 ರಂದು ದೇವಟ್ ಪರಂಬುವಿನಲ್ಲಿ ಘೋರ ದುರಂತ ನಡೆದಿದ್ದು, ಸಹಸ್ರ ಸಹಸ್ರ ಸಂಖ್ಯೆಯ ಕೊಡವರು ಅಸುನೀಗಿದ್ದಾರೆ. ಪ್ರಾಣ ಕಳೆದುಕೊಂಡ ಹಿರಿಯರ ಸ್ಮರಣೆಗಾಗಿ ಅಂತರರಾಷ್ಟ್ರೀಯ ಮಟ್ಟದ ಸ್ಮಾರಕವೊಂದನ್ನು ಇಲ್ಲಿ ನಿರ್ಮಿಸಬೇಕು. ಕೊಡವ ನರಮೇಧವನ್ನು ಯುಎನ್ಒ ಅಂತರರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು.
ಕೊಡವ ಬುಡಕಟ್ಟು ಜನಾಂಗದ ಸಮಗ್ರ ಸಬಲೀಕರಣಕ್ಕಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು, ಸ್ವಯಂ-ಆಡಳಿತ ಮತ್ತು ಎಸ್ಟಿ ಟ್ಯಾಗ್ ನೀಡಬೇಕು. ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಾಂವಿಧಾನಿಕ ಭದ್ರತೆ ಒದಗಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಸಿಎನ್ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಅಲ್ಮಂಡ ಜೈ, ಮಂದಪಂಡ ಮನೋಜ್, ಚೀಯಬೇರ ಸತೀಶ್ ಮತ್ತಿತರರು ಸಾಂಪ್ರದಾಯಿಕ ಕೋವಿಯೊಂದಿಗೆ ಪುಷ್ಪನಮನ ಸಲ್ಲಿಸಿ ಹಕ್ಕೊತ್ತಾಯಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.








