ಮಡಿಕೇರಿ ಸೆ.12 : ಕೊಡಗು ಜಿಲ್ಲಾ ವ್ಯಾಪಿ ಸಾವಿರಾರು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೋಂಸ್ಟೇ ಮಾಲೀಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಡಿವೈಎಸ್ಪಿ ಗಂಗಾಧರಪ್ಪ ಮನವಿ ಮಾಡಿದ್ದಾರೆ.
ಸೋಮಾವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ನಡೆದ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಿಯಮದ ಪ್ರಕಾರ ಹೋಂಸ್ಟೇ ಮಾಲೀಕರುಗಳು ಹೋಂಸ್ಟೇಗಳಲ್ಲಿಯೇ ವಾಸ ಇರಬೇಕು, ಮನೆಯ ವಾತಾವರಣ ಸೃಷ್ಟಿಸಬೇಕು. ಆದರೆ ಜಿಲ್ಲೆಯ ಹೋಂಸ್ಟೇಗಳಲ್ಲಿ ಮಾಲೀಕರು ವಾಸವೇ ಇರುವುದಿಲ್ಲ, ಕಾರ್ಮಿಕರೇ ಎಲ್ಲಾ ನೋಡಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹೋಂಸ್ಟೇಗಳಲ್ಲಿ ಮಾದಕ ವಸ್ತುಗಳ ಬಳಕೆ ಅಧಿಕವಾಗುತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಹೋಂಸ್ಟೇಗಳನ್ನು ಮಾಲೀಕರು ನಿರ್ವಹಿಸದೆ ಕಾರ್ಮಿಕರು ನಿರ್ವಹಣೆ ಮಾಡುತ್ತಿದ್ದಾರೆ. ಕೇವಲ 1 ಸಾವಿರ ಹೋಂಸ್ಟೇಗಳಷ್ಟೇ ಅಧಿಕೃತವಾಗಿ ಪರವಾನಗಿ ಪಡೆದಿದ್ದು, ಸಾವಿರಾರು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಇದು ಪ್ರವಾಸೋದ್ಯಮದ ಬೆಳವಣಿಗೆಗೆ ಮಾರಕವಾಗಿದ್ದು, ಹೋಂಸ್ಟೇ ಅಸೋಸಿಯೇಷನ್ ಗಳು ಎಚ್ಚೆತ್ತುಕೊಳ್ಳಬೇಕು. ಮಾದಕ ವಸ್ತು ಮತ್ತು ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ದೂರು ನೀಡಿ ಎಂದು ಡಿವೈಎಸ್ಪಿ ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋಮವಾರಪೇಟೆ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ರೋಹಿತ್, ಪ್ರವಾಸಿಗರ ಅನುಕೂಲಕ್ಕಾಗಿ ಸೋಮವಾರಪೇಟೆ ಭಾಗದ ಪ್ರವಾಸಿತಾಣಗಳಿಗೆ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಮತ್ತು ಪ್ರವಾಸಿತಾಣಗಳ ಪರಿಚಯದ ಕೈಪಿಡಿಯನ್ನು ಹೊರ ತರಲಾಗುವುದು ಎಂದರು.
ಹೋಂಸ್ಟೇ ಅಸೋಸಿಯೇಷನ್ ವತಿಯಿಂದ ಬಸ್ ಸ್ಟಾಪ್ಗಳನ್ನು ನವೀಕರಿಸಿ ಸ್ಥಳೀಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಅಭಿನಂದ್ ಎಸ್.ಎಲ್, ಮಡಿಕೇರಿ ಹೋಂಸ್ಟೇ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರುಗಳಾದ ಬಿ.ಜಿ.ಅನಂತ ಶಯನ, ಅಂಬೆಕಲ್ ನವೀನ್ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.










