ಮಡಿಕೇರಿ ಸೆ.28 : ಪ್ರವಾದಿ ಮುಹಮ್ಮದ್ ಅವರ ಮಾನವೀಯ ಶಿಕ್ಷಣಗಳನ್ನು ವ್ಯಾಪಕಗೊಳಿಸಲು, ಅವರ ಜೀವನ ಮತ್ತು ಸಂದೇಶವನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜಮಾತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ವತಿಯಿಂದ ಅ.6ರ ವರೆಗೆ ರಾಜ್ಯ ಮಟ್ಟದ ಅಭಿಯಾನ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮೈಸೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಮ್, ಈಗಾಗಲೇ “ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್(ಸ)” ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನ ಆರಂಭಗೊಂಡಿದ್ದು, ಅಭಿಯಾನದಲ್ಲಿ ಪ್ರವಾದಿಗಳ ಕುರಿತ ಪುಸ್ತಕಗಳ ಬಿಡುಗಡೆ, ವಿಚಾರ ಗೋಷ್ಠಿ, ಸಮಾವೇಶಗಳು, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ಶಚಿತ್ವ ಅಭಿಯಾನ, ಆಸ್ಪತ್ರೆ-ಅನಾಥಾಲಯ-ವೈದ್ಯಾಶ್ರಮಗಳ ಭೇಟಿ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆಯಂತಹ ಸಮಾಜ ಸೇವಾ ಚಟುವಟಿಕೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕೊಡಗಿನಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು, ಇಂದಿನ ನಮ್ಮ ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯ ಪರವಾಗಿ ಎದ್ದುನಿಲ್ಲಬೇಕಾಗಿದೆ. ಪರಸ್ಪರ ತಪ್ಪು ಕಲ್ಪನೆಗಳು, ಪೂರ್ವಾಗ್ರಹಗಳು, ದ್ವೇಷದ ವಾತಾವರಣವನ್ನು ನಿವಾರಿಸಿ ಶಾಂತಿ, ಸಹಬಾಳೆ, ಪರಸ್ಪರರನ್ನು ಅರಿಯುವಂತಹ ಸದುದ್ದೇಶದಿಂದ ಜಮಾಅತೆ ಇಸ್ಲಾಮೀ ಹಿಂದ್ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಜನತೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭ ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಲೇಖಕ ಯೋಗೇಶ್ ಮಾಸ್ಟರ್ ಬರೆದಿರುವ “ನನ್ನ ಅರಿವಿನ ಪ್ರವಾದಿ” ಪುಸ್ತಕವನ್ನ ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಪಿ.ಕೆ.ಅಬ್ದುಲ್ ರಹಮಾನ್, ಸದಸ್ಯರಾದ ಜೆ.ಹೆಚ್.ಮುಹಮ್ಮದ್ ಹನೀಫ್, ಸಿ.ಹೆಚ್.ಅಪ್ಸರ್, ಸದಸ್ಯ ಅಬ್ದುಲ್ಲಾ ಮಡಿಕೇರಿ ಉಪಸ್ಥಿತರಿದ್ದರು.










