ಮಡಿಕೇರಿ ಸೆ.29 : ಸ್ವಾಮಿ ವಿವೇಕಾನಂದರ ದಿವ್ಯ ಲೀಲಾ ಕ್ಷೇತ್ರ ಡಿವೈನ್ ಪಾರ್ಕ್ನ ಅಂಗ ಸಂಸ್ಥೆಯಾದ ಮಡಿಕೇರಿ ವಿವೇಕ ಜಾಗೃತ ಬಳಗದ ವತಿಯಿಂದ ಆತ್ಮೋನ್ನತಿ ಶಿಬಿರ ಕಾರ್ಯಕ್ರಮ ನಡೆಯಿತು.
ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಿವೈನ್ ಪಾರ್ಕ್ನ ಅಧಿಕಾರಿ ಪದ್ಮಲತಾ ರಾವ್, ಮಡಿಕೇರಿ ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಟಿ.ಎ.ಪದ್ಮವೇಣಿ ಹಾಗೂ ಮೂರ್ನಾಡು ವಿವೇಕ ಜಾಗೃತ ಬಳಗದ ಅಧ್ಯಕ್ಷೆ ದಿವ್ಯ ತೇಜ್ ಕುಮಾರ್ ಪಾಲ್ಗೊಂಡು ಮಾತನಾಡಿದರು.
ಬಂಧನ, ಮನನ, ಸ್ಮರಣ, ಗಮನದ ಆಧ್ಯಾತ್ಮಿಕ ಚಿಂತನೆಯನ್ನು ನೀಡಿದರು. ಮಾನವ ಜನ್ಮವನ್ನು ಆತ್ಮಶಕ್ತಿ ಜಾಗೃತಿಗಾಗಿ ತ್ಯಾಗ, ಸೇವೆ, ಸಾಧನೆಗಳೊಂದಿಗೆ, ಪಶುತ್ವದಿಂದ ಮಾನವತ್ವ, ಮಾನವತ್ವದಿಂದ ದೈವತ್ವಕ್ಕೆ ಏರಲು ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳೋಣ ಎಂದು ಸಲಹೆ ನೀಡಿದರು.
ಅಭಿಪ್ರಾಯ ಹಂಚಿಕೊಂಡ ಶಿಬಿರಾರ್ಥಿಗಳಾದ ಸೋಮಯ್ಯ ಮುಕ್ಕಾಟಿ, ಸೀತಮ್ಮ ಹಾಗೂ ವಿಶಾಲಾಕ್ಷಿ ಡಿವೈನ್ ಪಾರ್ಕ್ ನ ಮಹತ್ವ ಹಾಗೂ ತಾವು ಪಡೆದ ಕೃಪೆಯ ಬಗ್ಗೆ ತಿಳಿಸಿದರು.
ಜಾಗೃತ ಬಳಗದ ಖಜಾಂಚಿ ಲೀಲಾ ಶೆಡ್ತಿ ಸ್ವಾಗತಿಸಿ, ಯಶಿಕಾ ವಂದಿಸಿದರು. ಸುಮಾರು 100ಕ್ಕೂ ಹೆಚ್ಚು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಬಿರಾರ್ಥಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.










