ಮಡಿಕೇರಿ ಅ.4 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ವತಿಯಿಂದ ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಆಯುಷ್ಮಾನ್ ಭವ ಕಾರ್ಯಕ್ರಮದ ಪ್ರಯುಕ್ತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶನಿವಾರ ಸಂತೆ ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯ್ತಿ ಸಂಯುಕ್ತ ಆಶ್ರಯದಲ್ಲಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ ಸಾಮಾನ್ಯ ವೈದಶಾಸ್ತ್ರ, ಶಸ್ತ್ರ ಚಿಕಿತ್ಸೆ, ಕಣ್ಣು, ಪ್ರಸೂತಿ ಮತ್ತು ಸ್ತ್ರೀ ರೋಗ, ಮಕ್ಕಳ, ಚರ್ಮ ರೋಗ, ಕಿವಿ ಮೂಗು, ಗಂಟಲು, ಮೂಳೆ ಮತ್ತು ಕೀಲು, ಸಮುದಾಯ ವ್ಯೆದ್ಯಕೀಯ, ದಂತ, ಮಾನಸಿಕ ರೋಗ, ಆಸಾಂಕ್ರಾಮಿಕ ರೋಗಗಳ ನುರಿತ ತಜ್ಞ ವ್ಯೆದ್ಯರು ವೈದ್ಯಕೀಯ ಸೇವೆ ನೀಡಿದರು.
ಸುಮಾರು 500 ಕ್ಕೂ ಹೆಚ್ಚು ಹೊರ ರೋಗಿಗಳ ಭೇಟಿ ನೀಡಿದ್ದರು. 21 ಯುಡಿಐಡಿ ಕಾರ್ಡ್ಗಳು, 54 ಜನರು ಆರೋಗ್ಯ ಕಾರ್ಡ್ಗಳನ್ನು ಶಿಬಿರದಲ್ಲಿ ಸಾರ್ವಜನಿಕರಿಗೆ ಪ್ರಯೋಜನ ಕಲ್ಪಿಸಿಕೊಡಲಾಯಿತು.
ಶಿಬಿರಕ್ಕೆ ಭೇಟಿ ನೀಡಿದ ಶಾಸಕ ಡಾ.ಮಂಥರ್ ಗೌಡ, ಶಿಬಿರದ ಆಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರಸಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಹರೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಬೃಹತ್ ಆರೋಗ್ಯ ಶಿಬಿರವನ್ನು ಪ್ರತಿ ತಿಂಗಳು ಆಯೋಜನೆ ಮಾಡುವುದರಿಂದ ದೂರದ ಹಾಸನ, ಮಂಗಳೂರು, ಮೈಸೂರು ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗುವುದು ತಪ್ಪುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ಮಾತನಾಡಿ, ರಾಷ್ಟ್ರಪತಿಗಳು ಆಯುಷ್ಮಾನ್ ಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳವರೆಗೂ ಕೊಡಗು ವ್ಯೆದ್ಯಕೀಯ ಕಾಲೇಜಿನೊಂದಿಗೆ ಜಿಲ್ಲೆಯ ವಿವಿಧ ಕಡೆ ಆರೋಗ್ಯ ಕಾರ್ಯಕ್ರಮಗಳು ಹಾಗೂ ಶಿಬಿರಗಳನ್ನು ಆಯೋಜನೆ ಮಾಡಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ ಮಾತನಾಡಿ ಆಯುಷ್ಮಾನ್ ಭವ ಆರೋಗ್ಯ ಕಾರ್ಯಕ್ರಮದ ಕುರಿತು ಹಾಗೂ ಕಾರ್ಯಕ್ರಮದಲ್ಲಿ ನೀಡುವ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ಥಾನೀಯ ವ್ಯೆದ್ಯಾಧಿಕಾರಿ ಡಾ. ವಿ.ಎಸ್.ಸತೀಶ್ ಮಾತನಾಡಿ, ಕೊಡಗು ವ್ಯೆದ್ಯಕೀಯ ಕಾಲೇಜಿನಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯ ಗಡಿಭಾಗವಾದ ಶನಿವಾರಸಂತೆಯಲ್ಲಿ ಈ ರೀತಿಯ ಆರೋಗ್ಯ ಶಿಬಿರಗಳನ್ನು ನಡೆಸುವುದರಿಂದ ಈ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸಂಸ್ಥೆಯ ಉದ್ದೇಶ ಹಾಗೂ ಈ ಶಿಬಿರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ವ್ಯೆದ್ಯಕೀಯ ಕಾಲೇಜು ಬೋಧಕ ಆಸ್ಪತ್ರೆ ಮಡಿಕೇರಿಗೆ ಭೇಟಿ ನೀಡಬಹುದಾಗಿದೆ ಎಂದರು.
ಆಯುಷ್ಮಾನ್ ಕಾರ್ಡ್/ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಗಳನ್ನು ತಂದರೆ ಎಲ್ಲಾ ರೀತಿಯ ಪರೀಕ್ಷೆ ಹಾಗೂ ಚಿಕಿತ್ಸೆಗಳು ಉಚಿತವಾಗಿ ದೊರೆಯುವುದು ಎಂದು ತಿಳಿಸಿದರು.
ವ್ಯೆದ್ಯಕೀಯ ಆಸ್ಪತ್ರೆಗೆ ಬರುವ ಸುತ್ತಮುತ್ತಲಿನ ಎಲ್ಲರಿಗೂ ಇದೆ ರೀತಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತರಲು ತಿಳಿ ಹೇಳಬೇಕೆಂದು ಇದೆ ಸಂದರ್ಭದಲ್ಲಿ ಮನವಿ ಮಾಡಿದರು.
ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ನಿರೂಪಣೆ ಮಾಡಿದರು. ಹಿ.ಮ.ಆ. ನಿರೀಕ್ಷಣಾಧಿಕಾರಿ ಸರಸ್ವತಿ ವಂದಿಸಿದರು.
ಶಿಬಿರದಲ್ಲಿ ಕೊಡಗು ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ, ಉಚಿತ ಆಯುಷ್ಮಾನ್ ಕಾರ್ಡ್ಗಳ ನೋಂದಣಿ, ಉಚಿತ ಯುಡಿಐಡಿ ನೋಂದಣಿ, ದೇಹದಾನ, ನೇತ್ರದಾನ, ಅಂಗಾಂಗ ದಾನ ಕುರಿತು ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ದಿಲೀಪ್ ಹಾಗೂ ಕವನ್ ಆರೋಗ್ಯ ಮಿತ್ರರು ಮಾಹಿತಿಯನ್ನು ನೀಡಿದರು.
ಶನಿವಾರಸಂತೆ, ದುಂಡಹಳ್ಳಿ, ಹಂಡ್ಲಿ, ನೀಡ್ತ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವ್ಯೆದ್ಯಕೀಯ ಕಾಲೇಜಿನ ಡಾ. ಲೋಕೇಶ್ ಎ.ಜೆ, ಡಾ. ಪುರುಷೋತ್ತಮ್ , ಕಾಲೇಜಿನ ವ್ಯೆದ್ಯರು ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶನಿವಾರಸಂತೆ ವ್ಯೆದ್ಯರಾದ ಡಾ. ಇಂದುದರ್, ಡಾ. ಬಿಪಿನ್ ಜೋಸ್, ಡಾ. ಕನ್ನಿಕಾ ಕಾವೇರಮ್ಮ, ಶ್ರೀ ಮಹೇಶ್ ಶ್ರೀ ಪ್ರವೀಣ್ ಹಾಗೂ ಆಶಾ ಕಾರ್ಯಕರ್ತೆಯರು ಕೊಡ್ಲಿಪೇಟೆ ವ್ಯಾಪ್ತಿ ಹಾಗೂ ಶನಿವಾರಸಂತೆ ಸಮೂದಾಯ ಆರೋಗ್ಯ ಕೇಂದ್ರ ಶನಿವಾರಸಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.







