
ಕುಶಾಲನಗರ ಜ19 NEWS DESK : ಕುಶಾಲನಗರದಲ್ಲಿ ಜೂ.23 ರಂದು ಹಮ್ಮಿಕೊಂಡಿರುವ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಪ್ರಚಾರ ರಥವನ್ನು ಕುಶಾಲನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಚಾಲನೆ ದೊರೆಯಿತು. ಕುಶಾಲನಗರದ ಎಪಿಸಿಎಂಎಸ್ ಅಧ್ಯಕ್ಷ ಎಚ್. ಬಿ. ಚಂದ್ರಪ್ಪ ಹಾಗೂ ಕೊಡಗು ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಶಾಂಬ ಶಿವಯ್ಯ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿ, ಕುಶಾಲನಗರದಲ್ಲಿ ನಡೆಯುತ್ತಿರುವ ಜಿಲ್ಲೆಯ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ಅಭೂತ ಪೂರ್ವವಾಗಿ ಹಾಗೂ ಅರ್ಥಪೂರ್ಣವಾಗಿ ಸಂಘಟಿಸುವ ಸಲುವಾಗಿ ಜಿಲ್ಲೆಯಾದ್ಯಂತ ಪ್ರಚಾರ ರಥ ಸಾಗಲಿದೆ. ಭಕ್ತ ಜನ ಹಾಗೂ ಸಾರ್ವಜನಿಕರು ಸಮ್ಮೇಳನಕ್ಕೆ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಈ ಮೂಲಕ ಕೋರಲಾಗುತ್ತಿದೆ ಎಂದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಕೆ.ಎಸ್.ಮೂರ್ತಿ, ಯುವ ಘಟಕದ ಅಧ್ಯಕ್ಷ ಹಕ್ಕೆ ಮೋಹನ್, ಸಮ್ಮೇಳನದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎಸ್. ನಂದೀಶ್, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬಿ. ನಟರಾಜು, ತೊರೆನೂರು ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಬಿ. ಜಗದೀಶ್, ಉದ್ಯಮಿಗಳಾದ ಗೋಣಿಮರೂರು ನವೀನ್, ಬಿ. ಎನ್. ಶ್ರೀಧರ್, ಕಣಿವೆ ಲೋಕೇಶ್, ತೊರೆನೂರು ಗಣೇಶ್ ಇದ್ದರು.









