ಮಡಿಕೇರಿ ಅ.5 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಮುಖ ಬೇಡಿಕೆಯಾದ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯ ಕುರಿತು ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆಕ್ಷೇಪಣೆ ಸಲ್ಲಿಸಲು ವಿಳಂಬ ಧೋರಣೆ ತೋರುತ್ತಿರುವ ಕೇಂದ್ರ ಗೃಹ ಇಲಾಖೆಗೆ ರೂ.5 ಸಾವಿರ ದಂಡ ವಿಧಿಸಿದೆ.
ಉಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರುಗಳ ಸಮ್ಮುಖದಲ್ಲಿ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ವಕೀಲ ಕೀರನ್ ನಾರಾಯಣ್ ಅವರು ವಾದ ಮಂಡಿಸಿದರು.
ನ್ಯಾಯಾಲಯದ ಮುಂದೆ ಹಲವು ಬಾರಿ ಅರ್ಜಿ ವಿಚಾರಣೆಗೆ ಬಂದಿದ್ದು, ಪ್ರತಿವಾದಿಗಳಲ್ಲಿ ಒಂದಾದ ಕೇಂದ್ರವು ಅರ್ಜಿಗೆ ಆಕ್ಷೇಪಿಸಲು ಹೆಚ್ಚಿನ ಸಮಯ ಬಯಸಿ ಹಲವು ಬಾರಿ ವಿಚಾರಣೆಯನ್ನು ಮುಂದೂಡುವಂತೆ ಮಾಡಿದ ಕಾರಣ ದಂಡ ವಿಧಿಸಲಾಗಿದೆ.
ಮುಂದಿನ ವಿಚಾರಣೆಯನ್ನು ನ.29 ಕ್ಕೆ ಮುಂದೂಡಿದ್ದು, ಆಕ್ಷೇಪಣೆಯನ್ನು ಸಲ್ಲಿಸುವಂತೆಯೂ ಅದೇಶಿಸಿದೆ. ಕರ್ನಾಟಕ ರಾಜ್ಯ ಸರಕಾರ, ಕೇಂದ್ರ ಕಾನೂನು ಇಲಾಖೆ ಹಾಗೂ ಗೃಹ ಇಲಾಖೆ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿವೆ.
ಕೊಡವ ಭೂ ರಾಜಕೀಯ ಸ್ವಾಯತ್ತತೆ ಸಂಬಂಧ ಆಯೋಗ ರಚಿಸುವಂತೆ ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣ್ಯನ್ ಸ್ವಾಮಿ ಅವರ ಮೂಲಕ ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ವಿರಾಟ್ ಹಿಂದೂಸ್ಥಾನ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಶ್ರೇಯಾ ನಾಚಪ್ಪ, ಅರೆಯಡ ಗಿರೀಶ್, ಕಿರಿಯಮಾಡ ಶೆರಿನ್, ಬೇಪಡಿಯಂಡ ಬಿದ್ದಪ್ಪ, ಅಪ್ಪಾರಂಡ ಪೂವಣ್ಣ, ವಿಎಚ್ಎಸ್ ರಾಜ್ಯಾಧ್ಯಕ್ಷ ನಿಕುಂಜ್ ಶಾ, ಸದಸ್ಯರಾದ ನಟರಾಜ್, ರವಿಶಂಕರ್, ವಕೀಲರಾದ ಪಾರ್ಥ್, ಶ್ರೀಕಂಠ ಶರ್ಮಾ, ಮಂಜುನಾಥ್ ಅವರುಗಳು ಹಾಜರಿದ್ದು, ಡಾ.ಸುಬ್ರಮಣ್ಯನ್ ಸ್ವಾಮಿ ಅವರೊಂದಿಗೆ ಸಮಾಲೋಚಿಸಿದರು.









