ಸೋಮವಾರಪೇಟೆ ಅ.6 : ಅಮರಸುಳ್ಯ ದಂಗೆಯ ಮೂಲಕ ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಧ್ವನಿ ಎತ್ತಿ ಹೋರಾಡುವ ಮೂಲಕ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಅಡಿಪಾಯ ಹಾಕಿದರು ಎಂದು ಸಂತ ಜೊಸೇಫರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಛಾಯ ಹೇಳಿದರು.
ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಸಂತಜೊಸೇಫರ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಗಂಗಾಧರ್ಶೇಟ್ ಸುಲೋಚನಾ ಬಾಯಿ ಸ್ಮಾರಕ ದತ್ತಿ ಉಪನ್ಯಾಸ “ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು” ವಿಷಯದಲ್ಲಿ ಮಾತನಾಡಿದರು.
1852 ಭಾರತದ ಇತಿಹಾಸದಲ್ಲಿ ಮಹತ್ವದ ವರ್ಷ, ಮೊದಲ ಭಾರತ ಸ್ವಾತಂತ್ರ್ಯ ಸಂಗ್ರಾಮವಾಗಿತ್ತು. ಬ್ರಿಟಿಷರು ಅದನ್ನು ದಂಗೆ ಎಂದೇ ಕರೆದರು. ಅದಕ್ಕಿಂತ ಮೊದಲು 1834ರಲ್ಲಿ ಬ್ರಿಟಿಷರ ವಿರುದ್ಧ ಕೊಡಗಿನಲ್ಲಿ ಅಮರಸುಳ್ಯ ದಂಗೆ ನಡೆಯಿತು. ಕೆದಂಬಾಡಿ ರಾಮೇಗೌಡ, ಗುಡ್ಡೆಮನೆ ಅಪ್ಪಯ್ಯಗೌಡ ಅವರ ನೇತೃತ್ವದಲ್ಲಿ ಹೋರಾಟ ನಡೆಯಿತು. ಬ್ರಿಟಿಷರು ರೈತರ ಹೋರಾಟವನ್ನು ದರೋಡೆ, ಸುಲಿಗೆ ಎಂದು ಕರೆದು ರಾಮೇಗೌಡ, ಅಪ್ಪಯ್ಯಗೌಡರನ್ನು ಮಡಿಕೇರಿಯಲ್ಲಿ ಗಲ್ಲಿಗೇರಿಸಿದರು. ಹೋರಾಟಗಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.
1835ರಲ್ಲಿ ರೈತರೆಲ್ಲ ಒಟ್ಟು ಸೇರಿ ರೈತಸೇನೆಯನ್ನು ಕಟ್ಟಿಕೊಂಡು, ಆಯುಧಗಳನ್ನು ಸಂಗ್ರಹಿಸಿಕೊಂಡು ಬ್ರಿಟಿಷರ ವಿರುದ್ಧ ಯುದ್ದಕ್ಕೆ ಮುಂದಾದರು. ಬ್ರಿಟಿಷರ ಕಚೇರಿಗಳಿಗೆ ಬೆಂಕಿ ಹಚ್ಚಯಿತು. ಪ್ರಾರಂಭದಲ್ಲಿ ರೈತಸೇನೆಗೆ ಜಯಸಿಕ್ಕಿದ್ದರೂ, ನಂತರ ಮಂಗಳೂರಿನಲ್ಲಿ ಬ್ರಿಟಿಷರು ಸುಸಜ್ಜಿತ ಯುದ್ದ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು 1015 ರೈತ ಹೋರಾಟಗಾರರನ್ನು ಬಂಧಿಸಿದರು. ಅನೇಕರನ್ನು ಕೊಂದರು ಎಂದು ವಿಷಾಧ ವ್ಯಕ್ತಪಡಿಸಿದರು.
ಸ್ವಾತಂತ್ರ ಹೋರಾಟಕ್ಕೆ ಧುಮುಕಿದ ಅನೇಕ ರೈತಾಪಿ ವೀರರು ತಮ್ಮ 40ನೇ ವಯಸ್ಸಿಗೆಲ್ಲಾ ಜೀವವನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗಿನ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅನೇಕ ವೀರರು ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹವರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಸಾರಾಯಿ ವಿರುದ್ಧ ಹೋರಾಟ, ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಹೋರಾಟ, 1929ರಲ್ಲಿ ಮಡಿಕೇರಿ ಕೋಟೆಯಲ್ಲಿ ಬ್ರಿಟಿಷ್ ಧ್ವಜವನ್ನು ಕಿತ್ತೆಸೆದು ಸ್ವತಂತ್ರ್ಯದ ಕಹಳೆ ಮೊಳಗಿಸಿದರು. 1942ರ ಕ್ವಿಟ್ ಇಂಡಿಯಾ ಚಳುವಳಿ ಕೊಡಗಿನ ಉಗ್ರ ರೂಪವನ್ನೇ ತಾಳಿತ್ತು. 98 ಮಂದಿ ಸ್ವತಂತ್ರ್ಯ ಹೋರಾಟಗಾರರು ದೀರ್ಘಕಾಲದ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು ಎಂದು ಹೇಳಿದರು.
ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಲು ಹೆಚ್ಚಿನ ಆಸಕ್ತಿ ವಹಿಸುವ ಜಯವೀರಮಾತೆ ಚರ್ಚ್ನ ಧರ್ಮಗುರು ಎಂ.ರಾಯಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ.ಸಾ.ಪ.ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ, ಪದವಿ ಕಾಲೇಜಿನ ಪ್ರಾಂಶುಪಾಲ ಹರೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಹ್ಯಾರಿಮೋರಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾರ್ಗರೆಟ್ ನೆವಿಲ್, ಕ.ಸಾ.ಪ.ಪದಾಧಿಕಾರಿಗಳಾದ ಎ.ಪಿ.ವೀರರಾಜು, ಸಿ.ಎಸ್.ನಾಗರಾಜ್, ಕೆ.ಪಿ.ದಿನೇಶ್, ಜೆ.ಸಿ.ಶೇಖರ್, ಎಂ.ಎ.ರುಬಿನಾ, ಶ್ರೀಧರ್ ಹೂವಲ್ಲಿ, ಜೋಕಿಂವಾಸ್, ಜ್ಯೋತಿ ಅರುಣ್ ಮತ್ತಿತರರು ಇದ್ದರು. ವಿದ್ಯಾರ್ಥಿನಿಯರಾದ ನಿರ್ಪಿತ ಸ್ವಾಗತಿಸಿ, ಪ್ರಜ್ಞಾ ವಂದಿಸಿದರು.









