ನಾಪೋಕ್ಲು ಅ.9 : ಸ್ಪರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ನಿವೃತ್ತ ಸುಬೇದಾರ್ ಮೇಜರ್ ಬಾಳೆಯಡ ಅಪ್ಪಣ್ಣ (ಅಪ್ಪಾಜಿ) ಹೇಳಿದರು.
ನೆಲಜಿ ಅಂಬಲ ಶಾಲಾ ಮೈದಾನದಲ್ಲಿ ಅಂಬಲ ಮಹಿಳಾ ಸಮಾಜಜ ವತಿಯಿಂದ ಆಯೋಜಿಸಿದ ಮೂರನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೋವಿ ಪೂಜೆ ನೆರವೇರಿಸಿದ ಬಳಿಕ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸೇನೆಯಲ್ಲಿ ಶೂಟಿಂಗ್ ಸಂದರ್ಭ ಕಠಿಣ ಮುಂಜಾಗ್ರತಾ ಕ್ರಮಗಳನ್ನು ವಹಿಸುತ್ತಾರೆ. ಆದರೆ ಇಲ್ಲಿ ಪ್ರತಿಯೊಬ್ಬರೂ ಕೋವಿಯನ್ನು ಎಚ್ಚರಿಕೆ ಮತ್ತು ಜವಾಬ್ದಾರಿಯುತವಾಗಿ ಬಳಸುವಂತಾಗಬೇಕು ಎಂದರು ಸಲಹೆ ನೀಡಿದರು.
ಮಹಿಳಾ ಸಮಾಜದ ಮಹಿಳಾ ಮಣಿಗಳು ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಪ್ರಸಂಸ್ಥೆ ವ್ಯಕ್ತಪಡಿಸಿದ ಅವರು, ಶುಭಹಾರೈಸಿದರು.
ಅಂಬಲ ಮಹಿಳಾ ಸಮಾಜ ಅಧ್ಯಕ್ಷ ಅಪ್ಪುಮಣಿಯ0ಡ ಡೇಸಿ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಈ ಸಂದರ್ಭ ಕಾಫಿ ಬೆಳೆಗಾರ, ಎಳ್ತಂಡ ಬೋಪಣ್ಣ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ, ನಿವೃತ್ತ ನಬಾರ್ಡ್ ಎ ಜಿ ಎಂ ಮುಂಡಂಡ ಸಿ.ನಾಣ್ಣಯ್ಯ, ದಿ ತಾಮರ ಕೊಡಗು ರೆಸಾರ್ಟಿನ ವ್ಯವಸ್ಥಾಪಕ ಕಲ್ಯಾಟoಡ ಗಿರೀಶ್ ಸುಬ್ಬಯ್ಯ, ಕಾಫಿ ಬೆಳೆಗಾರ ಕೋಟೆರ ಸುರೇಶ್, ಮಾಜಿ ಸೈನಿಕ ಮಣವಟ್ಟಿರ ಸಾಬು ಉತ್ತಪ್ಪ, ಅಂಬಲ ಮಹಿಳಾ ಸಮಾಜದ ಸಲಹಾ ಸಮಿತಿಯ ಅಧ್ಯಕ್ಷ ಮಣವಟ್ಟಿರ ಕಮಲ ಬೆಳ್ಳಿಯಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆ ಆಗಿರುವ ನಾಪೋಕ್ಲು ಕೊಡುವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣ್ಣಯ್ಯ, ನಿರ್ದೇಶಕಿ ಝಾನ್ಸಿ ಮಂದಪ್ಪ, ಗ್ರಾ.ಪಂ ಉಪಾಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್ ಇವರುಗಳನ್ನು ಸಮಾಜದ ವತಿಯಿಂದ ಸಾಲು ಒದಿಸಿ ಕಿರು ಕಾಣಿಕೆಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಕಲ್ಲರಂಡ ಪ್ರೀತಿ ಸತೀಶ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಕಮಲ ಬೆಳ್ಳಿಯಪ್ಪ ಸ್ವಾಗತಿಸಿ, ಡೇಸಿ ಸೋಮಣ್ಣ ನಿರೂಪಿಸಿ ವಂದಿಸಿದರು. ಅನಂತರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸ್ಪರ್ಧಾಲುಗಳಿಗೆ ಸ್ಪರ್ಧ ಕಾರ್ಯಕ್ರಮಗಳು ಜರುಗಿದವು.
ವರದಿ : ದುಗ್ಗಳ ಸದಾನಂದ








