ಮಡಿಕೇರಿ ಅ.12 : ವಿಶ್ವ ವಿಖ್ಯಾತ ಮೈಸೂರು ದಸರಾ ಸಿನಿಮೋತ್ಸವದಲ್ಲಿ ಕೊಡಗಿನ ನಿರ್ದೇಶಕರು ಹಾಗೂ ಕಲಾವಿದರ ನಾಲ್ಕು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದೇ ಮೊದಲ ಬಾರಿಗೆ ಕೊಡಗಿನ ನಿರ್ದೇಶಕರುಗಳ ಇಷ್ಟು ಸಂಖ್ಯೆಯ ಚಿತ್ರಗಳು ಆಯ್ಕೆಯಾಗಿದ್ದು, ಚಿತ್ರ ತಂಡಗಳಲ್ಲಿ ಹರ್ಷ ಮೂಡಿದೆ.
ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ “ಅಂತರ್ಮುಖ” ಕನ್ನಡ ಚಿತ್ರ, ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ, ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ “ಪೊಮ್ಮಾಲೆ ಕೊಡಗ್” ಕೊಡವ ಚಿತ್ರ, ಕೊಡಗಿನ ಪ್ರಥಮ ಮಹಿಳಾ ನಿರ್ದೇಶಕಿ ಎಂಬ ಕೀರ್ತಿಗೆ ಪಾತ್ರರಾಗಿರುವ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶನದ “ರಂಗಪ್ರವೇಶ” ಕನ್ನಡ ಚಿತ್ರ ಮತ್ತು ಸಿಂಚನ ಪೊನ್ನವ್ವ ನಿರ್ದೇಶನದ “ಕೌಡಿಕಳಿ” ಕೊಡವ ಚಿತ್ರ ದಸರಾ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.
ಕೊಡಗಿನ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗೆ ಒತ್ತು ನೀಡಿರುವ ನಾಲ್ಕು ಚಿತ್ರಗಳು ದಸರಾ ಉತ್ಸವದ ಸಂದರ್ಭ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಅ.16 ರಂದು ಬೆಳಗ್ಗೆ 10.15ಗೆ “ಅಂತರ್ಮುಖ”, ಅ.19 ರಂದು ಮಧ್ಯಾಹ್ನ 1.15ಕ್ಕೆ “ರಂಗ ಪ್ರವೇಶ”, ಸಂಜೆ 4.15ಕ್ಕೆ “ಪೊಮ್ಮಾಲೆ ಕೊಡಗ್” ಚಲನಚಿತ್ರ ಇನಾಕ್ಸ್ ಚಿತ್ರಮಂದಿರದಲ್ಲಿ ಮತ್ತು ಅ.19 ರಂದು ಬೆಳಗ್ಗೆ 10 ಗಂಟೆಗೆ ಡಿಆರ್ಸಿ ಚಿತ್ರಮಂದಿರದಲ್ಲಿ “ಕೌಡಿಕಳಿ” ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಕೊಡಗು, ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಚಲನಚಿತ್ರ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿತ್ರಗಳನ್ನು ನೋಡುವ ಮೂಲಕ ನಿರ್ದೇಶಕರು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮನವಿ ಮಾಡಿದ್ದಾರೆ.
ಮೈಸೂರು ದಸರಾ ಸಿನಿಮೋತ್ಸವಕ್ಕೆ ಕೊಡಗಿನವರ 4 ಚಿತ್ರಗಳು ಆಯ್ಕೆಯಾಗಿದ್ದು, ಇದೊಂದು ದಾಖಲೆಯಾಗಿದೆ. ಅಲ್ಲದೆ ಜಿಲ್ಲೆಯ ನಿರ್ದೇಶಕರು ಹಾಗೂ ಕಲಾವಿದರಿಗೆ ಮತ್ತಷ್ಟು ಚಿತ್ರಗಳನ್ನು ತೆರೆಗೆ ತರುವ ಹುಮ್ಮಸ್ಸು ಮೂಡಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.










