
ಮಡಿಕೇರಿ NEWS DESK ಮಾ.3 : ಪರಿಶಿಷ್ಟ ಜಾತಿ ಸಮೂಹಕ್ಕೆ ಮಾರಕವಾಗಿದ್ದ ನ್ಯಾ.ನಾಗಮೋಹನ್ ದಾಸ್ ಅವರ ಒಳ ಮೀಸಲಾತಿಗಳ ವರದಿಗೆ ಬದಲಾಗಿ, ಹಳೆಯ ಮೀಸಲಾತಿ ನಿಯಮಗಳಂತೆ 56 ಸಾವಿರ ಹುದ್ದೆಗಳ ನೇಮಕಾತಿಗೆ ನಿರ್ಧರಿಸಿರುವ ಸರಕಾರದ ನಿರ್ಧಾರವನ್ನು ಸ್ವಾಗತಿಸುವುದಾಗಿ ಕೊಡಗು ಜಿಲ್ಲಾ ಬಲಗೈ ಜಾತಿಯ ಸಮುದಾಯದ ಪ್ರಮುಖ ಟಿ.ಈ.ಸುರೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ನಾಗಮೋಹನ್ ದಾಸ್ ಅವರು ಒಳಮೀಸಲಾತಿಗೆ ಸಂಬಂಧಿಸಿದಂತೆ ನೀಡಿರುವ ವರದಿ ಅವೈಜ್ಞಾನಿಕವಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದುದಲ್ಲದೆ, ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆ ಕರೆಸಿ, ಅದರಲ್ಲಿ ಹಳೇ ಮೀಸಲಾತಿ ನಿಯಮಗಳಂತೆ ನೇಮಕಾತಿಗೆ ತೀರ್ಮಾನ ಕೈಗೊಳ್ಳಲು ಕಾರಣರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಬಲಗೈ ಜಾತಿ ಸಮುದಾಯದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು. ಪರಿಶಿಷ್ಟ ಜಾತಿಯ 101 ಉಪಜಾತಿಯವರು ಪರಸ್ಪರ ಸೌಹಾರ್ದತೆಯಿಂದ ಇದ್ದೇವೆ. ಪಟ್ಟಭದ್ರ ಹಿತಾಸಕ್ತಿಗಳು ಇದೀಗ ನಮ್ಮ ನಡುವೆ ಒಡಕು ಮೂಡಿಸಿ ಪರಸ್ಪರ ಕಿತ್ತಾಡುವಂತೆ ಮಾಡುತ್ತಿರುವುದಾಗಿ ಆರೋಪಿಸಿದ ಟಿ.ಈ.ಸುರೇಶ್, ಇಂತಹ ಷಡ್ಯಂತ್ರಗಳಿಗೆ ಪರಿಶಿಷ್ಟ ಜಾತಿಯ ಉಪಜಾತಿಯವರು ಅವಕಾಶ ನೀಡಬಾರದು. ಪರಿಶಿಷ್ಟ ಜಾತಿ ಮೀಸಲಾತಿಯಡಿಯ ನೇಮಕಾತಿ ಪ್ರಕ್ರಿಯೆಗಳು ಇಲ್ಲಿಯವರೆಗೆ ಅರ್ಹತೆಯ ಆಧಾರದ ಮೇಲೆ ನಡೆದಿದೆ. ಮುಂದೆಯೂ ಹಾಗೆಯೇ ನಡೆಯಲೆಂದು ಒತ್ತಾಯಿಸಿದ ಅವರು ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ನ್ಯಾಯ ಸಮ್ಮತ ನೇಮಕಾತಿಗಳು ನಡೆಯಲಿ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು. ಸರ್ಕಾರದಲ್ಲಿರುವ ಪರಿಶಿಷ್ಟ ಸಮುದಾಯದ ಸಚಿವರು ತಮ್ಮ ಸಮುದಾಯದ ಹಿತ ಕಾಯುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಹೆಚ್.ಪಿ.ವಿಜಯ ಕುಮಾರ್, ಸಮುದಾಯದ ಪ್ರಮುಖರಾದ ಹೆಚ್.ಟಿ.ಶ್ಯಾಂ ಹಾಗೂ ಹೆಚ್.ಎಂ.ಜಯರಾಮ್ ಉಪಸ್ಥಿತರಿದ್ದರು.








