ಮಡಿಕೇರಿ ನ.12 : ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡಬೇಕು ಮತ್ತು ಉತ್ತಮ ಸಂಸ್ಕಾರಗಳನ್ನು ಕಲಿಸಬೇಕೆಂದು ಕೊಡಗು ಜಿಲ್ಲಾ ಮಲೆಯಾಳಿ ಸಮಾಜದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ಕರೆ ನೀಡಿದ್ದಾರೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆಯಾಳಿ ಸಮಾಜದ ವತಿಯಿಂದ ಕಾನ್ ಬೈಲ್ ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎರಡನೇ ವರ್ಷದ ಓಣಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಗುರು ಹಿರಿಯರಿಗೆ ಗೌರವ ನೀಡುವ, ಸತ್ಕರಿಸುವಂತಹ ಸತ್ಪ್ರಜೆಗಳನ್ನಾಗಿ ರೂಪಿಸಬೇಕಿದೆ.
ಎಲ್ಲಿ ನೋಡಿದರೂ ಮಕ್ಕಳು ಮೊಬೈಲ್ ನಲ್ಲಿ ಮಗ್ನರಾಗಿರುತ್ತಾರೆ, ತಮ್ಮ ಎದುರು ಯಾರೇ ಹಿರಿಯರು ಬಂದರೂ ಗೌರವ ನೀಡದಂತಹ ಮನೋಸ್ಥಿತಿ ಬಂದಿದೆ. ಪೋಷಕರು ಈ ಬಗ್ಗೆ ಎಚ್ಚರ ವಹಿಸಿ ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರೆ ಸಾಲದು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಸಮಾಜದ ರೋಗಗ್ರಸ್ಥ ಹಾಗೂ ಧರ್ಮದ್ರೋಹಿಗಳು ಮಾಡುತ್ತಿರುವ ಕುತಂತ್ರ ಹಾಗೂ ಕುಕೃತ್ಯಗಳ ಬಗ್ಗೆ ನಾವು ಎಚ್ಚರ ವಹಿಸದಿದ್ದಲ್ಲಿ ಹಿಂದೂಗಳಿಗೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ ಎಂದು ವಿಜಯ ಹೇಳಿದರು.
ಪ್ರಬಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್ ಮಾತನಾಡಿ, ಮಲೆಯಾಳಿ ಬಾಂಧವರು ಕೊಡಗಿನ ಎಲ್ಲಾ ಜನರೊಂದಿಗೆ ಸಾಮರಸ್ಯದಿಂದ ಉತ್ತಮ ಬದುಕು ಕಟ್ಟಿಕೊಂಡು ಸನಾತನ ಸಂಸ್ಕೃತಿಯನ್ನು ರಕ್ಷಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾನ್ ಬೈಲ್ ಗ್ರಾ.ಪಂ ಅಧ್ಯಕ್ಷ ಮುಂದೋಡಿ ಜಗನ್ನಾಥ್ ಮಾತನಾಡಿ, ಮಾರಕವಾದ ಮೊಬೈಲ್ ಗಳಿಂದಾಗಿ ಇಂದು ಮಕ್ಕಳು ಸಂಪ್ರದಾಯಗಳನ್ನು ಮರೆಯುತ್ತಿದ್ದಾರೆ. ಓಣಂ ಆಚರಣೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಎಲ್ಲರ ಕಣ್ತೆರೆಸಲಿ ಎಂದು ಹೇಳಿದರು.
ತಾಲ್ಲೂಕು ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಕೆ.ಗಂಗಾಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಓಣಂ ಆಚರಣೆ ಅಂಗವಾಗಿ ಮಹಿಳೆಯರಿಗೆ ಪೂಕಳಂ ಹಾಗೂ ಮಕ್ಕಳಿಗೆ ನೃತ್ಯ ಸ್ಪರ್ಧೆ ನಡೆಯಿತು.
ಕಾನ್ ಬೈಲ್ ಪಂಚಾಯಿತಿ ಪಿಡಿಒ ಗೂಳಪ್ಪ ಕೂತಿನ, ನಾಕೂರು ಕೊಡವ ಕೂಟದ ಅಧ್ಯಕ್ಷ ಕಾಯಪಂಡ ಎ.ಕಾರ್ಯಪ್ಪ, ಕಾಫಿ ಬೆಳೆಗಾರ ಕೆ.ಎಸ್.ಸುರೇಶ್, ಕರವಂಡ ಕುಂಞಪ್ಪ, ನಾಕೂರು ಗಂಗಾಧರೇಶ್ವರ ದೇವಾಲಯದ ಅಧ್ಯಕ್ಷ ಎಲ್.ಎಂ.ರುದ್ರೇಶ್, ನಾಕೂರು ಯೂತ್ ಕ್ಲಬ್ ಅಧ್ಯಕ್ಷ ಎ.ಟಿ.ಚಂದ್ರಶೇಖರ್, ಸೋಮವಾರಪೇಟೆ ತಾಲ್ಲೂಕು ಮಲೆಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ಚೋಮಣಿ, ರಂಜಿನಿ, ಸಜಿ, ವಿ.ಕೆ.ವಿಜಯಕುಮಾರ್, ಬಿ.ಜಿ.ರಮೇಶ್ ಮೊದಲಾದವರಿದ್ದರು.
ಮಲೆಯಾಳಿ ಬಾಂಧವರ ವಿಶೇಷ ಖಾದ್ಯಗಳ ಓಣಂ ಸದ್ಯದೊಂದಿಗೆ ಹಬ್ಬದ ಸಂಭ್ರಮ ಕಳೆಗಟ್ಟಿತು. ತಾ.ಪಂ ಮಾಜಿ ಸದಸ್ಯ ಶಂಕರನಾರಾಯಣ್ ಸ್ವಾಗತಿಸಿ, ಕೆ.ಜಿ.ರಾಜ ವಂದಿಸಿದರು.











