ಮಡಿಕೇರಿ ನ.13 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಮಡಿಕೇರಿ ರೋಟರಿ ಸಹಯೋಗದೊಂದಿಗೆ ಚೇರಂಬಾಣೆ ವೃತ್ತದ ಮಕ್ಕಳ ದಿನಾಚರಣೆ ಮತ್ತು ಅಂಗನವಾಡಿ ದಿನಾಚರಣೆ ನಡೆಯಿತು.
ಮಡಿಕೇರಿಯ ರೆಡ್ ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ನೂರು ಮಕ್ಕಳು ಛದ್ಮವೇಶ ನೃತ್ಯ ಮತ್ತು ಅಭಿನಯ ಗೀತೆಗಳಲ್ಲಿ ಪಾಲ್ಗೊಂಡಿದ್ದರು. ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ರೋಟರಿ ಸಂಸ್ಥೆ ಅಧ್ಯಕ್ಷರಾದ ಗೀತಾ ಗಿರೀಶ್ ಪ್ರಮಾಣ ಪತ್ರ, ಡ್ರಾಯಿಂಗ್ ಪುಸ್ತಕ, ಕ್ರಯನ್ಸ್ ಗಳನ್ನು ವಿತರಿಸಿದರು.
ಅಂಗನವಾಡಿ ದಿನಾಚರಣೆಯ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಪೋಷಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಛದ್ಮವೇಶ ನೃತ್ಯ ಮತ್ತು ಹಾಡುಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ರೆಡ್ ಕಾರ್ಡ್ ಸಂಸ್ಥೆಯ ಸಭಾಪತಿಗಳಾದ ರವೀಂದ್ರ, ರೋಟರಿ ಸಂಸ್ಥೆಯ ಅಧ್ಯಕ್ಷರಾದ ಗೀತ ಗಿರೀಶ್ ಕಾರ್ಯಕ್ರಮಕ್ಕೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶುಭ ಕೋರಿದರು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಹಾಗೂ ಮೇಲ್ವಿಚಾರಕರನ್ನು ಅಭಿನಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಚಟುವಟಿಕೆಗಳನ್ನು ಹೆಬ್ಬಟ್ಟಗೇರಿ ಅಂಗನವಾಡಿ ಕಾರ್ಯಕರ್ತೆ ಧರಣಿ ನಡೆಸಿಕೊಟ್ಟರು. ಮೇಪಾಡಂಡ ಸವಿತ ಕೀರ್ತನ್ ಸ್ವಾಗತಿಸಿದರು. ಅಂಗನವಾಡಿ ಕೇಂದ್ರದ ಮಕ್ಕಳು ಪ್ರಾರ್ಥಿಸಿದರು. ಬೆಟ್ಟಗೇರಿ ಅಂಗನವಾಡಿ ಕಾರ್ಯಕರ್ತೆ ಪುಷ್ಪ ವಂದಿಸಿದರು. ಮಕ್ಕಂದೂರು ಅಂಗನವಾಡಿ ಕಾರ್ಯಕರ್ತೆ ಸರೋಜ ನಿರೂಪಿಸಿದರು.










