ಸುಂಟಿಕೊಪ್ಪ ನ.15 : ಬ್ಯಾಂಕಾಕ್ ನಲ್ಲಿ ನಡೆದ ಅಂತರ್ ರಾಷ್ಟ್ರೀಯ ಸೆಸ್ಟೋ ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪದ ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫಾ ಅವರು ಚಾಪಿಯನ್ಸ್ ತಂಡವಾಗಿ ಹೊರಹೊಮ್ಮುವ ಮೂಲಕ ಕೊಡಗಿಗೆ ಕೀರ್ತಿ ತಂದಿದ್ದಾರೆ.
ಶ್ರೀಲಂಕಾದ ರತ್ನಪುರದಲ್ಲಿ ನ. 9ರಿಂದ13ರವರೆಗೆ ನಡೆದ ಅಂತರಾಷ್ಟ್ರೀಯ ಸೆಸ್ಟೋ ಬಾಲ್ ಚಾಂಪಿಯನ್ ಶಿಪ್ನ ಭಾರತ ಪುರುಷರ ತಂಡದ ಥೈಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ದ ಸೆಸ್ಟೋ ಬಾಲ್ ನಲ್ಲಿನ ತಮ್ಮ ಚಾಕಾಚಕ್ಯತೆಯನ್ನು ಪ್ರದರ್ಶಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿ ಕ್ರೀಡಾ ಜಿಲ್ಲೆ ಎನಿಸಿರುವ ಕೊಡಗಿಗೆ ಕೀರ್ತಿ ತಂದಿದ್ದಾರೆ. ಈ ಪಂದ್ಯಾವಳಿಯಲ್ಲಿ ಶಾಹಿಲ್ ಉಸ್ಮಾನ್ ಅವರು ಭಾರತ ತಂಡದ ಕ್ಯಾಪ್ಟನ್ ಆಗಿಯೂ ಕೂಡ ಕಾರ್ಯ ನಿರ್ವಹಿಸಿದ್ದು, ಸುಂಟಿಕೊಪ್ಪ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ಕೆ.ಎ. ಉಸ್ಮಾನ್ ರವರ ಪುತ್ರನಾಗಿದ್ದಾರೆ. ಇರ್ಷಾದ್ ಮುಸ್ತಾಫ ಅವರು ಅಂತರ್ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ಗೆ ಪಾತ್ರರಾಗಿದ್ದು ಇವರು ಸುಂಟಿಕೊಪ್ಪದ ದಿವಂಗತ ಜಾವಮನೆ ಮುಸ್ತಫಾರವರ ಪುತ್ರನಾಗಿದ್ದಾರೆ.
ಈ ಟೂರ್ನಮೆಂಟ್ ನಲ್ಲಿ ದೇಶಕ್ಕೆ ಬಂಗಾರದ ಪದಕಗಳನ್ನು ತಂದುಕೊಟ್ಟು ಕೊಡಗು ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿರುವ ಶಾಹೀಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಫ ಅವರಗಳು ಬುಧವಾರ ನವದೆಹಲಿಗೆ ಹಿಂತಿರುಗಿ ಬೆಂಗಳೂರಿನ ಮೂಲಕ ಕೊಡಗಿಗೆ ಆಗಮಿಸಿದರು. ಕೊಪ್ಪ ಗೇಟ್ಗೆ ತಲುಪುತ್ತಿದ್ದಂತೆ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಸ್ವಾಗತಿಸಿದರು. ಸುಂಟಿಕೊಪ್ಪಕ್ಕೆ ಆಗಮಿಸುತ್ತಿದ್ದಂತೆ ಅಯ್ಯಪ್ಪ ಸ್ವಾಮಿ ವೃತ್ತದ ಬಳಿ ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು.










