ಮಡಿಕೇರಿ ನ.28 : ಕಳೆದ ಬಾರಿ ರಾಜ್ಯದಲ್ಲಿ ಸುರಿದ ಭಾರಿ ಮಳೆ ಹಾಗು ಪ್ರವಾಹದಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಪ್ರಾಕೃತಿಕ ವಿಕೋಪ ನಿಧಿಯ ಕಾಮಗಾರಿಯನ್ನು ಪ್ರಸ್ತುತ ತಡೆ ಹಿಡಿಯುವ ಮೂಲಕ ಚೆಟ್ಟಳ್ಳಿ ಗ್ರಾಮದ ಅಬಿವೃದ್ಧಿಗೆ ತಡೆಯೊಡ್ಡಿರುವ ಕ್ರಮ ಸರಿಯಲ್ಲವೆಂದು ಚೆಟ್ಟಳ್ಳಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಬಲ್ಲಾರಂಡ ಕಂಠಿಕಾರ್ಯಪ್ಪ ತಿಳಿಸಿದ್ದಾರೆ.
ಚೆಟ್ಟಳ್ಳಿ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರಕಾರದ ಶಾಸಕರಾದ ಅಪ್ಪಚ್ಚುರಂಜನ್ರವರು ಖುದ್ದಾಗಿ ಸ್ಥಳ ಪರಿಶೀಲಿಸಿ, ಪ್ರಾಕೃತಿಕ ವೀಕೋಪ ನಿಧಿಯಿಂದ 69 ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸುಮಾರು 7 ಕೋಟಿ ಹಣ ಬಿಡುಗಡೆಗೊಂಡಿತ್ತು ಎಂದು ತಿಳಿಸಿದರು.
ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ತ್ಯಾಗತ್ತೂರಿನಿಂದ ಕೂಡ್ಲೂರು ಚೆಟ್ಟಳ್ಳಿ ಶಾಲೆಯ ಮೂಲಕ ಹಾದು ಹೋಗುವ ರಸ್ತೆ ಕಾಮಗಾರಿಗೆ 10 ಲಕ್ಷ, ಚೆಟ್ಟಳ್ಳಿ, ಪುತ್ತರಿರ ಕುಟುಂಬದ ಸ್ಮಶಾನ ರಸ್ತೆಗೆ 10 ಲಕ್ಷ, ಕಂಡಕರೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ ಅಭಿವೃದ್ಧಿಗಾಗಿ 30ಲಕ್ಷ ಹಣ ಬಿಡುಗಡೆಯಾದರೂ ನೂತನ ಸರಕಾರ ಅಸ್ತಿತ್ವಕ್ಕೆ ಬಂದನಂತರ ಕಾಮಗಾರಿಯನ್ನೆಲ್ಲ ತಡೆಹಿಡಿಯಲಾಗಿದೆಯೆಂದು ಆರೋಪಿಸಿದರು.
ಹಾಲಿ ಶಾಸಕರಾದ ಡಾ.ಮಂತರ್ ಗೌಡ ಪ್ರಾಕೃತಿಕ ವಿಕೋಪ ನಿಧಿಯ ಹಣವನ್ನು ತಡೆಹಿಡಿಯದೇ ಅಭಿವೃದ್ಧಿಗೆ ಸಹಕರಿಸಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಶಕ್ತಿ ಕೇಂದ್ರದ ಸಹಪ್ರಮುಖ್ ಎನ್.ಎಸ್.ರವಿ, ಚೆಟ್ಟಳ್ಳಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಾಲಾಶ್ರೀ, ತಾಲೂಕು ಬಿಜೆಪಿ ಸದಸ್ಯ ಅಕ್ಕಾರಿ ದಯಾನಂದ, ಓಬಿಸಿ ಅಧ್ಯಕ್ಷ ಕೆ.ಆರ್.ಸುನಿಲ್, ಚೆಟ್ಟಳ್ಳಿ ಯುವ ಘಟಕದ ಅಧ್ಯಕ್ಷ ಅರುಣ ಸಿದ್ದಿಕಲ್, ವಾರ್ಡ್ ಅಧ್ಯಕ್ಷರುಗಳಾದ ಪುತ್ತರಿರ ಶಿವು ನಂಜಪ್ಪ, ಪೇರಿಯನ ಉದಯ್ ಕುಮಾರ್, ಮಾಯಾಕೃಷ್ಣ ಹಾಗೂ ಕಾರ್ಯದರ್ಶಿ ಮುರುಘ ಉಪಸ್ಥಿತರಿದ್ದರು.









