ಮಡಿಕೇರಿ ಡಿ.7 : ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಕೊಟ್ಟುಕತೀರ ಯಶೋಧ ಪ್ರಕಾಶ್ ನಿರ್ಮಿಸಿರುವ ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತೀರ ಪ್ರಕಾಶ್ ಕಾರ್ಯಪ್ಪ ಅವರು ನಿರ್ದೇಶಿಸಿರುವ “ಪೊಮ್ಮಾಲೆ ಕೊಡಗ್” ಕೊಡವ ಚಿತ್ರ ಸ್ಯಾಂಡಲ್ ವುಡ್ ನ ಪ್ರತಿಷ್ಠಿತ “ನಂದಿ ಫಿಲ್ಮಂ ಅವಾರ್ಡ್-2023” ರಲ್ಲಿ “ಮೆಚ್ಚುಗೆಯ ಚಿತ್ರ” ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬೆಂಗಳೂರಿನ ಒರಿಯನ್ ಮಾಲ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಪೊಮ್ಮಾಲೆ ಕೊಡಗ್” ಚಿತ್ರದಲ್ಲಿ ಅಭಿನಯಿಸಿರುವ ನಟಿ, ಸಹ ನಿರ್ದೇಶಕಿ, ಬರಹಗಾರ್ತಿ ಮತ್ತು ಸಂಭಾಷಣೆ ರಚನೆಕಾರರಾದ ಈರಮಂಡ ಹರಿಣಿ ವಿಜಯ್ ಅವರು ಕಾಂತಾರ ಖ್ಯಾತಿಯ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ನಿರ್ಮಾಪಕಿ ಕೊಟ್ಟುಕತೀರ ಯಶೋಧ ಪ್ರಕಾಶ್ ಅವರ ಅನುಪಸ್ಥಿತಿಯಲ್ಲಿ ಅವರು ಪ್ರಶಸ್ತಿ ಪಡೆದುಕೊಂಡರು.
ಉತ್ತಮ ಚಿತ್ರ ಪ್ರಶಸ್ತಿ ಚಾರ್ಲಿ 777, ಉತ್ತಮ ನಟ ರಿಷಬ್ ಶೆಟ್ಟಿ, ಉತ್ತಮ ನಟಿ ಪ್ರಶ್ತಿಯನ್ನು ಸಪ್ತಮಿ ಗೌಡ ಪಡೆದುಕೊಂಡರು. ಅಲ್ಲದೆ ಉತ್ತಮ ಛಾಯಾಗ್ರಹಣ, ಸಂಕಲನ, ಸಂಗೀತ, ಹಾಸ್ಯ ನಟ, ಪೋಷಕ ನಟ, ನಟಿ ಸೇರಿದಂತೆ ವಿವಿಧ ವಿಭಾಗಗಳ ವಿಜೇತರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಖ್ಯಾತ ನಾಯಕ ನಟ ಕ್ರೇಜಿ ಸ್ಟಾರ್ ರವಿಚಂದ್ರನ್, ಹಿರಿಯ ಚಿತ್ರನಟ ಶ್ರೀನಾಥ್, ಸುಂದರರಾಜ್, ವಸಿಷ್ಠ ಸಿಂಹ, ಶರಣ್, ಶಿವಕುಮಾರ್, ವಿನೋದ್ ರಾಜ್, ಬಿಗ್ ಬಾಸ್ ಖ್ಯಾತಿಯ ಎನ್.ಸಿ.ಅಯ್ಯಪ್ಪ, ನಟಿಯರಾದ ಭವ್ಯ, ಅನುಪ್ರಭಾಕರ್, ಕೊಡಗಿನ ತಾರೆ ಪ್ರೇಮಾ, ವಿಜಯಲಕ್ಷ್ಮಿ, ಹರಿಪ್ರಿಯ, ವನಿತಾ ವಾಸು, ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರ, ಶಮಿತಾ ಮಲ್ನಾಡ್, ಗುರುಕಿರಣ್, ಖ್ಯಾತ ನಿರ್ದೇಶಕರಾದ ಸಾಯಿ ಪ್ರಕಾಶ್, ಸುನಿಲ್ ಕುಮಾರ್ ದೇಸಾಯಿ, ಎಸ್.ಕೆ.ಭಾರ್ಗವ, ಕರ್ನಾಟಕ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್, ನಿತ್ಯಾನಂದ ಪ್ರಭು ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ನಟ, ನಟಿಯರು ಉಪಸ್ಥಿತರಿದ್ದರು. ಮಾಸ್ಟರ್ ಆನಂದ್ ಹಾಗೂ ಸಮೀರಾ ಕಾರ್ಯಕ್ರಮ ನಿರೂಪಿಸಿದರು.
::: ಹಲವು ಪ್ರಶಸ್ತಿ :::
“ಪೊಮ್ಮಾಲೆ ಕೊಡಗ್” ಕೊಡವ ಚಿತ್ರವನ್ನು ನಿರ್ಮಿಸಿದ ಕೊಟ್ಟುಕತೀರ ಯಶೋಧ ಪ್ರಕಾಶ್ ಹಾಗೂ ಚಿತ್ರ ನಿರ್ದೇಶಕ ಕೊಟ್ಟುಕತೀರ ಪ್ರಕಾಶ್ ಕಾರ್ಯಪ್ಪ ಅವರು ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರ, ಪರಿಸರಕ್ಕೆ ಒತ್ತು ನೀಡಿ ಚಿತ್ರಗಳನ್ನು ತೆರೆಗೆ ತರುವ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಚಿತ್ರರಂಗದ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ ಕೊಡಗಿನ ಹಲವು ಪ್ರತಿಭೆಗಳನ್ನು ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಈಗಾಗಲೇ “ಪೊಮ್ಮಾಲೆ ಕೊಡಗ್” ಚಿತ್ರ ಹಲವು ಪ್ರಶಸ್ತಿಗಳನ್ನು ಪಡೆದು ಖ್ಯಾತಿ ಗಳಿಸಿದ್ದು, ಇದೀಗ “ನಂದಿ ಫಿಲ್ಮಂ ಅವಾರ್ಡ್-2023” ರಲ್ಲಿ “ಮೆಚ್ಚುಗೆಯ ಚಿತ್ರ” ಪ್ರಶಸ್ತಿಯನ್ನು ಗೆದ್ದಿರುವ ಬಗ್ಗೆ ಪ್ರಕಾಶ್ ಕಾರ್ಯಪ್ಪ, ಯಶೋಧ ಪ್ರಕಾಶ್ ಹಾಗೂ ನಟಿ ಈರಮಂಡ ಹರಿಣಿ ವಿಜಯ್ ಹರ್ಷ ವ್ಯಕ್ತಪಡಿಸಿದ್ದಾರೆ.
::: ನಂದಿ ಫಿಲ್ಮಂ ಅವಾರ್ಡ್ :::
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಭಾ.ಮಾ. ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ “ನಂದಿ ಫಿಲ್ಮಂ ಅವಾರ್ಡ್” ನ ಸಂಸ್ಥಾಪರಾಗಿದ್ದಾರೆ. ನಂದಿ ಪ್ರಶಸ್ತಿಯಲ್ಲಿ ಕನ್ನಡ ಚಿತ್ರಗಳು ಸೇರಿದಂತೆ ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಭಾಷೆಯ ಚಿತ್ರಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.








