ಮಡಿಕೇರಿ ಡಿ.19 : ಸರಕಾರಿ ದಾಖಲೆಗಳಲ್ಲಿ “ಕೊಡಗರು” ಬದಲಿಗೆ “ಕೊಡವ” ಎಂದು ನಮೂದಿಸಲು ಕಾನೂನು ಹೋರಾಟ ನಡೆಸಿ ಯಶಸ್ವಿಯಾದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಪ್ರಯತ್ನಕ್ಕೆ ಅರಪಟ್ಟು ಮುಕ್ಕಾಟಿರ ಕುಟುಂಬಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರಿಗೆ ಅಭಿನಂದನಾ ಪತ್ರ ಬರೆದಿರುವ ಅರಪಟ್ಟು ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಕ್ಯಾಟಿ ಉತ್ತಪ್ಪ ಅವರು, ಕಳೆದ ಹಲವು ವರ್ಷಗಳ ಗೊಂದಲ ನಿವಾರಣೆಗೆ ನಿರಂತರ ಹೋರಾಟದ ಮೂಲಕ ಶ್ರಮಿಸಿದ ನಿಮ್ಮ ಕಾರ್ಯ ಶ್ಲಾಘನೀಯ. ಇದಕ್ಕಾಗಿ ಇಡೀ ಅರಪಟ್ಟು ಮುಕ್ಕಾಟಿರ ಕುಟುಂಬಸ್ಥರು ಆಭಾರಿಯಾಗಿದ್ದೇವೆ. ಸರಕಾರಿ ದಾಖಲೆಗಳಲ್ಲಿ “ಕೊಡಗರು” ಬದಲಿಗೆ “ಕೊಡವ” ಎಂದು ನಮೂದಿಸುವ ಕ್ರಮ ಸ್ವಾಗತಾರ್ಹವಾಗಿದೆ. ಇನ್ನು ಮುಂದೆಯೂ ಕೊಡವರ ಪರವಾದ ನ್ಯಾಯಸಮ್ಮತ ಬೇಡಿಕೆಗಳ ಹೋರಾಟಕ್ಕೆ ಜಯ ಸಿಗಲಿ ಎಂದು ತಿಳಿಸಿದ್ದಾರೆ.











