ಮಡಿಕೇರಿ ಜ.6 : ಹಿರಿಯ ಪತ್ರಕರ್ತ ಕೋವರ್ ಕೊಲ್ಲಿ ಇಂದ್ರೇಶ್, ಸಹೋದರಿ ಕೆ.ಸಿ.ಸವಿತ , ಸಹೋದರರಾದ ಕೆ.ಸಿ ಸುಂದ್ರೇಶ್ ಮತ್ತು ಕೆ.ಸಿ ಚಂದ್ರೇಶ್ ತಮ್ಮ ತಾಯಿ ಶ್ರೀಮತಿ ಬಿ.ಸಿ.ಪುಷ್ಪಲತಾ ಚಂದ್ರಶೇಖರ್ ಅವರ ಹೆಸರಿನಲ್ಲಿ ಕೊಡಗು ಪ್ರೆಸ್ ಕ್ಲಬ್ ನಲ್ಲಿ ನೂತನ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದು, ದತ್ತಿ ಹಣ ರೂ.1 ಲಕ್ಷ ದ ಚೆಕ್ ಅನ್ನು ಪ್ರೆಸ್ ಕ್ಲಬ್ ಗೆ ಹಸ್ತಾಂತರಿಸಿದರು.
ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಖಜಾಂಚಿ ಬೊಳ್ಳಜಿರ ಬಿ. ಅಯ್ಯಪ್ಪ ಅವರು ಚೆಕ್ ಸ್ವೀಕರಿಸಿದರು.
ಕ್ಲಬ್ ಸದಸ್ಯರಿಗೆ ಪ್ರತಿ ವರ್ಷವೂ ದತ್ತಿ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದ್ದು, ಮಾನವೀಯ ವರದಿ ವಿಭಾಗದ ಅತ್ಯುತ್ತಮ ವರದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈಗಾಗಲೇ ಪ್ರೆಸ್ ಕ್ಲಬ್ ನಲ್ಲಿ ಎರಡು ದತ್ತಿ ಪ್ರಶಸ್ತಿ ಇದೆ ಎಂದು ತೇಜಸ್ ಮಾಹಿತಿ ನೀಡಿದರು.
ಕೋವರ್ ಕೊಲ್ಲಿ ಇಂದ್ರೇಶ್ ಮಾತನಾಡಿ, 1998 ರಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ತಮ್ಮ ತಂದೆ ದಿವಂಗತ ಚಂದ್ರಶೇಖರ್ ಅವರ ಹೆಸರಿನಲ್ಲಿ ನಾವು ಪ್ರಶಸ್ತಿಯನ್ನು ಸ್ಥಾಪಿಸಿದ್ದೇವೆ. 2020 ರಂದು ದೈವಾಧೀನರಾದ ತಮ್ಮ ತಾಯಿಯವರ ಹೆಸರಿನಲ್ಲೂ ಕೊಡಗು ಪ್ರೆಸ್ ಕ್ಲಬ್ ನಲ್ಲೂ ಇದೀಗ ಪ್ರಶಸ್ತಿಯನ್ನು ಸ್ಥಾಪಿಸಿದ್ದೇವೆ. ಜಿಲ್ಲೆಯ ಪತ್ರಕರ್ತರಿಂದ ಅತ್ಯುತ್ತಮ ಮಾನವೀಯ ವರದಿಗಳು ಮೂಡಿಬರುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭ ಕೆ.ಸಿ.ಸವಿತ, ಕೆ.ಸಿ.ಸುಂದ್ರೇಶ್, ಕೆ.ಸಿ.ಚಂದ್ರೇಶ ಹಾಗೂ ಪ್ರೆಸ್ ಕ್ಲಬ್ ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ, ನಿರ್ದೇಶಕ ವಿಶ್ವ ಕುಂಬೂರು ಹಾಜರಿದ್ದರು.








