ಮಡಿಕೇರಿ ಜ.13 : ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜ.15 ರಂದು 34ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ.ಸುಧೀರ್, ಉತ್ಸವದ ಪ್ರಯುಕ್ತ ಜ.14 ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ ಸೇರಿದಂತೆ ವಿವಿಧ ಸೇವೆಗಳು ನಡೆಯಲಿದೆ ಎಂದು ತಿಳಿಸಿದರು.
ಮಕರ ಸಂಕ್ರಾಂತಿ ಮಹೋತ್ಸವದ ದಿನವಾದ ಜ.15 ರಂದು ಬೆ.6.30 ಕ್ಕೆ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, 7 ಕ್ಕೆ ಶ್ರೀ ಮುತ್ತಪ್ಪ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಪೂಜೆ, 7.30 ರಿಂದ ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆ, 8.30ಕ್ಕೆ ಶ್ರೀ ಕುಟ್ಟಿಚಾತನ್ ದೇವರ ವೆಳ್ಳಾಟಂ, 9 ಕ್ಕೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಬೆ.10 ಕ್ಕೆ ಶ್ರೀ ಗುಳಿಗ ದೇವರ ವೆಳ್ಳಾಟಂ, 10.30 ಕ್ಕೆ ಶ್ರೀ ಅಯ್ಯಪ್ಪನ ಅಲಂಕಾರ ಪೂಜೆ, ಬೆ.11 ಕ್ಕೆ ಶ್ರೀ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ, ಸಂಜೆ 6ಕ್ಕೆ ಭಜನೆ, 7ಕ್ಕೆ ಅಲಂಕಾರ ಪೂಜೆ, ಪಡಿ ಪೂಜೆ, 8 ಗಂಟೆಗೆ ದೀಪಾರಾಧನೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದರು.
ಅನ್ನಸಂತರ್ಪಣೆಗೆ ಅಕ್ಕಿ, ತರಕಾರಿ ಇತ್ಯಾದಿ ಸಾಮಾಗ್ರಿಗಳನ್ನು ಜ.13 ರಂದು ಬೆಳಗ್ಗೆ 7 ಗಂಟೆಗೆ ಮುಂಚಿತವಾಗಿ ನೀಡುವಂತೆ ಹಾಗೂ ಸಂಕಲ್ಪ ಸೇವೆ ಮಾಡುವ ಭಕ್ತಾದಿಗಳು ಜ.14 ರಂದು ಬೆ.7 ಗಂಟೆಗೆ ಉಪಸ್ಥಿತರಿರುವಂತೆ ಮನವಿ ಮಾಡಿದರು. ದೇವಸ್ಥಾನದಲ್ಲಿ ತುಲಾ ಭಾರ ಸೇವೆಗೂ ಅವಕಾಶವಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಅಯ್ಯಪ್ಪ ದೇವಸ್ಥಾನ ಸಮಿತಿ ಸ್ಥಾಪಕರಾದ ಡಾ. ಎಂ.ಜಿ. ಪಾಟ್ಕರ್, ಸಮಿತಿ ಅಧ್ಯಕ್ಷರಾದ ವಿನೋದ್ ವಿ.ಎಸ್., ಮಹಿಳಾ ಘಟಕದ ಖಜಾಂಚಿ ರಾಣಿ ಮುತ್ತಮ್ಮ, ಪ್ರಮುಖರಾದ ಉಣ್ಣಿ ಕೃಷ್ಣನ್ ಹಾಗೂ ಬಿ.ಎಂ.ಪೂವಪ್ಪ ಉಪಸ್ಥಿತರಿದ್ದರು.









