
ಸೋಮವಾರಪೇಟೆ ಜು.3 NEWS DESK : ಭಾರತೀಯ ಸೇನೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೆಗ್ಗುಳ ಗ್ರಾಮದ ಎಚ್.ಎ.ಸತೀಶ್ ಅವರಿಗೆ ಗ್ರಾಮಸ್ಥರು ಆತ್ಮೀಯ ಸ್ವಾಗತ ಕೋರಿದರು. ಗ್ರಾಮದ ಪ್ರವೇಶದ್ವಾರದಲ್ಲಿ ಅವರನ್ನು ಬರಮಾಡಿಕೊಂಡ ಗ್ರಾಮಸ್ಥರು, ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿ ಪುಷ್ಪವೃಷ್ಠಿ ಮಾಡುವ ಮೂಲಕ ಗೌರವ ಸಲ್ಲಿಸಿದರು. ಹೆಗ್ಗುಳ ಗ್ರಾಮದ ಕೃಷಿಕರಾದ ಅಪ್ಪಸ್ವಾಮಿ ಹಾಗೂ ಜಯಮ್ಮ ಅವರ ಪುತ್ರರಾದ ಸತೀಶ್, ಯುವಕರಿಗೆ ದೇಶಸೇವೆಯ ಮಾದರಿಯಾಗಿ ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡು ವಿವಿಧ ಗಡಿಭಾಗಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಉರಿ ಸೆಕ್ಟರ್, ಕಾರ್ಗಿಲ್, ರಾಜಸ್ಥಾನ, ಅಸ್ಸಾಂ, ಮಣಿಪುರ ಸೇರಿದಂತೆ ವಿದೇಶದ ಸುಡಾನ್ನಲ್ಲಿಯೂ ಸೇವೆ ಸಲ್ಲಿಸಿ ದೇಶರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ತಮ್ಮ ಸುದೀರ್ಘ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸ್ವಗ್ರಾಮಕ್ಕೆ ಮರಳಿದ ಸತೀಶ್ ಅವರನ್ನು ಗ್ರಾಮಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ಅಭಿನಂದಿಸಿ, ಅವರ ಸೇವೆಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧನಿಗೆ ಗೌರವ ಅರ್ಪಿಸಿದರು.









