ಸುಂಟಿಕೊಪ್ಪ ಜ.16 : ತಮಿಳು ಸಂಘದ ವತಿಯಿಂದ ಪೊಂಗಲ್ (ಮಕರ ಸಂಕ್ರಾಂತಿ) ಹಬ್ಬದ ಆಚರಣೆಯ ಅಂಗವಾಗಿ ಕಳಸ ಮೆರವಣಿಗೆಯು ಶ್ರದ್ಧಾಭಕ್ತಿಯಿಂದ ನಡೆಯಿತು.
ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯದಿಂದ ನೂರಾರು ಮಹಿಳೆಯರು, ಪುರುಷರು ಸೇರಿದಂತೆ ಮಕ್ಕಳು ಪೂಜೆ ನೆರವೇರಿಸಿ, ಕೊಪ್ಪದ ನಾದಸ್ವರದೊಂದಿಗೆ ಗಣಪತಿ ದೇವಾಲಯದಿಂದ ಹಾಲಿನ ಕಳಸ ಹೊತ್ತು ಮೆರವಣಿಗೆ ಮೂಲಕ ಮುಖ್ಯ ಬೀದಿಯಲ್ಲಿ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಅಲ್ಲಿಂದ ಚಾಮುಂಡೇಶ್ವರಿ ದೇವಾಲಯದಲ್ಲಿ ಸಮಾಪ್ತಿಗೊಂಡಿತು.
ಬೆಳಿಗ್ಗೆ ಕಳಸಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ವೃಕ್ಷೋದ್ಭವ ದೇವಾಲಯದ ಟ್ರಸ್ಟಿ ಎ.ಲೋಕೇಶ್ ಕುಮಾರ್ ಅವರು ಶಿರಕ್ಕೆ ಕಳಸ ಇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಅಲ್ಲಿ ದೇವಿಗೆ ಅಭಿಷೇಕ ಮಾಡಿ ನಂತರ ವಿಶೇಷ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಲಾಯಿತು. ನೆರೆದಿದ್ದ ಭಕ್ತ ಸಮೂಹಕ್ಕೆ ಸಮಿತಿ ವತಿಯಿಂದ ಪೊಂಗಲ್ ಮತ್ತು ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭ ತಮಿಳು ಸಮಿತಿ ಅಧ್ಯಕ್ಷ ಅಯ್ಯಪ್ಪ, ಗ್ರಾ.ಪಂ ಸದಸ್ಯ ಎಂ.ಮಂಜುನಾಥ್, ವಾಹನ ಚಾಲಕರ ಸಂಘದ ಅಧ್ಯಕ್ಷ ಸುರೇಶ, ದೊರೈ, ವಿಘ್ನೇಶ್, ಅರುಣಾ, ಸೂರ್ಯ, ಕುಶಾಲನಗರ ಪೊಂಗಲ್ ಸಮಿತಿ ಅಧ್ಯಕ್ಷ ಪಳನಿಸ್ವಾಮಿ, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.










