
ಮಡಿಕೇರಿ ಮಾ.13 NEWS DESK : ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಸವಿತಾ ಭಟ್ ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದಿದ್ದಾರೆ. ನಮಗೆ ಮಾದರಿಯಾದ ಮಹಿಳೆಯರನ್ನು ದೂರದಲ್ಲಿ ಹುಡುಕಬೇಕಾಗಿಲ್ಲ, ನಮ್ಮ ಸುತ್ತಮುತ್ತಲೇ ಅನೇಕ ಮಹಿಳೆಯರಿದ್ದಾರೆ. ಮಹಿಳೆಗೆ ಮುಖ್ಯವಾಗಿಬೇಕಾದದ್ದು ಸ್ವಾತಂತ್ರ್ಯ, ನೆಮ್ಮದಿಯ ಜೀವನ ಮತ್ತು ಮನೆಯವರಿಂದ ತಾವು ಮಾಡುವ ಕೆಲಸಕ್ಕೆ ಪ್ರೋತ್ಸಾಹ. ಇಷ್ಟಿದ್ದರೆ ಮಹಿಳೆ ಏನು ಬೇಕಾದರೂ ಸಾಧಿಸಬಲ್ಲಳು, ಸಮಾಜಕ್ಕೆ ಕೊಡುಗೆಯನ್ನು ನೀಡಬಲ್ಲಳು ಎಂದರು. ಮಹಿಳಾ ದಿನಾಚರಣೆಯನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿದೆ, ವರ್ಷದ ಎಲ್ಲಾ ದಿನಗಳಲ್ಲೂ ಗೌರವ ಮತ್ತು ಒಳ್ಳೆಯ ಸ್ಥಾನ ಮಾನಗಳು ಸಿಗುವಂತಾಗಬೇಕು ಎಂದು ಸವಿತಾ ಭಟ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯೆಯರಾದ ವಸುಂಧರಾ ಪ್ರಸನ್ನ, ಆಯಿಷಾ ಹಮೀದ್, ಉಮಾ ಈಶ್ವರ್, ಪ್ರೇಮಾ ರಾಘವಯ್ಯ, ಜಯಶೀಲಾ ಪ್ರಕಾಶ್, ವಸಂತಿ ಪೂಣಚ್ಚ ಉಪಸ್ಥಿತರಿದ್ದರು. ದೀಪಾಂಜಲಿ ತಂಡದವರು ಪ್ರಾರ್ಥಿಸಿದರು. ವಿದ್ಯಾ ದೇವರಾಜ್ , ಮೇಘಾ ಸುಜಯ್, ಶೈಲಾ ಮಂಜುನಾಥ್ ಮತ್ತು ಭಾರತಿ ರಮೇಶ್ ನಿರೂಪಿಸಿದರು. ಸಂಘದ ಉಪಾಧ್ಯಕ್ಷೆ ಶ್ಯಾಮಲಾ ದಿನೇಶ್ ವಂದಿಸಿದರು. :: ಸನ್ಮಾನ :: ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಬಾಳೆಯಡ ದಿವ್ಯಾ ಮಂದಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. :: ಸ್ಪರ್ಧೆ :: ಸಂಘದ ಸದಸ್ಯೆಯರಿಗಾಗಿ ಅಡಿಗೆ ಸ್ಪರ್ಧೆ, ಹೂ ಜೋಡಣೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತೀರ್ಪುಗಾರರಾಗಿ ರಿಶಿಕಾ ಶ್ಯಾಮ್ ಮತ್ತು ಗಾಯತ್ರಿ ಸೋಮಯ್ಯ, ಲಕ್ಷೀ ಈಶ್ವರ ಭಟ್ ಮತ್ತು ಶ್ರೀ ರಕ್ಷಾ ಅವರು ಆಗಮಿಸಿದ್ದರು .ಮಧ್ಯಾಹ್ನದ ನಂತರ ಸಂಘದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.









