ಮಡಿಕೇರಿ ಜ.17 : ಅಯೋಧ್ಯೆಯಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ದಿವ್ಯ ಕಾರ್ಯಕ್ರಮದಂದು ಕೊಡಗಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಆಯೋಜಿತವಾಗಿದ್ದು, ಈಗಾಗಲೆ ಹಲವೆಡೆಗಳಲ್ಲಿ ಆಕರ್ಷಕ ಅಲಂಕಾರಗಳು ಗಮನ ಸೆಳೆಯಲಾರಂಭಿಸಿವೆ.
ತಾಲ್ಲೂಕು ಕೇಂದ್ರ ವಿರಾಜಪೇಟೆಯ ಶ್ರೀ ಗಣಪತಿ ದೇವಸ್ಥಾನದ ಬುಡದಲ್ಲಿರುವ ಪುರಾತನ ‘ಗಡಿಯಾರ ಕಂಬ’ದ ಸುತ್ತಮುತ್ತಲ ಪ್ರದೇಶವನ್ನು ಕೇಸರಿ ಬಣ್ಣದ ಬಾವುಟಗಳಿಮದ ಅತ್ಯಾಕರ್ಷಕವಾಗಿ ಅಲಂಕರಿಸಲಾಗಿದೆ.
ರಾಮಚಂದ್ರನ ಪ್ರಾಣಪ್ರತಿಷ್ಠಾಪನಾ ಕಾರ್ಯದ ಹಿನ್ನೆಲೆ, ಅಂದಿನ ದಿನವನ್ನು ಉತ್ಸಾಹ ಮತ್ತು ಶ್ರದ್ಧಾಭಕ್ತಿಗಳಿಂದ ಎದುರ್ಗೊಳ್ಳಲು ಹತ್ತು ಹಲವು ಕಾರ್ಯಕ್ರಮಗಳು ಸದ್ದು ಗದ್ದಲವಿಲ್ಲದೆ ಆಯೋಜನೆಗೊಳ್ಳುತ್ತಿದೆ. ಹಲವು ಕಡೆ ಅಂದು ಅನ್ನಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
::: ಬಾಡಗರಕೇರಿ :::
ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆಯನ್ನು ಗ್ರಾಮಸ್ಥರು ವೀಕ್ಷಿಸಲು ಅನುಕೂಲವಾಗುವಂತೆ ನೇರ ಪ್ರಸಾರ ವ್ಯವಸ್ಥೆಯೊಂದಿಗೆ, ದೇವಸ್ಥಾನದಲ್ಲಿ ರಾಮ ಭಜನೆಯನ್ನು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.15ರವರೆಗೆ ಆಯೋಜಿಸಲಾಗಿದೆ. ರಾಮ ಲಲ್ಲಾ ಪ್ರತಿಷ್ಠಾಪನೆಯ ಮಧ್ಯಾಹ್ನ 12.20 ಗಂಟೆಗೆ ರುದ್ರಾಭಿಷೇಕವನ್ನು ಆಯೋಜಿಸಲಾಗಿದೆಯೆಂದು ಶ್ರೀ ಮೃತ್ಯುಂಜಯ ದೇವಸ್ಥಾನದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.
::: ಸತ್ಯನಾರಾಯಣ ಪೂಜೆ :::
ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದ ಪುರಾತನ ಶ್ರೀ ಭಗವತಿ ದೇಗುಲದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಪನೆಯ ದಿನದಂದು ಬೆಳಗ್ಗೆ 10.30 ಕ್ಕೆ ಸತ್ಯನಾರಾಯಣ ಪೂಜೆಯನ್ನು, ಮಧ್ಯಾಹ್ನ 12.30 ಗಂಟೆಗೆ ಅನ್ನದಾನವನ್ನು ಆಯೋಜಿಸಲಾಗಿದೆ.
ನಗರದ ಶ್ರೀಓಂಕಾರೇಶ್ವರ, ಶ್ರೀಆಂಜನೇಯ, ಪೇಟೆ ಶ್ರೀರಾಮಮಂದಿರ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದೆ.









