ಸೋಮವಾರಪೇಟೆ ಜ.17 : ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತ ಬದಿಯಲ್ಲಿರುವ ಕೆರೆಗೆ ಬಿದ್ದು, ಕಾರಿನಲ್ಲಿದ್ದ 8 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದಲ್ಲಿ ನಡೆದಿದೆ.
ಹಾನಗಲ್ಲು ಗ್ರಾಮದ ನಿವಾಸಿ ಶಿವಣ್ಣ ಎಂಬವರು ತಮ್ಮ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡಿಸಿ, ಸಂಜೆ ಯಡೂರು ಮಾರ್ಗವಾಗಿ ಬರುವಾಗ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಯಡೂರು ಕೆರೆಗೆ ಬಿದ್ದಿದ್ದು, ಕಾರಿನೊಳಗಿದ್ದವರು ಕಿಟಕಿಗಳನ್ನು ಒಡೆದು ಹೊರಬರುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ.
ಮದಲಾಪುರದ ಜ್ಯೋತಿ, ಲಕ್ಷ್ಮಿ, ಮನು, ಸೀತಮ್ಮ, ರತಿ ಅವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.
ಭದ್ರತಾ ಬೇಲಿ ಅಳವಡಿಸಲು ಒತ್ತಾಯ :: ಕರೆಯು ರಸ್ತೆಯ ಅಂಚಿನಲ್ಲಿದ್ದು, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಯಾವುದೇ ಅನಾಹುತಗಳು ಸಂಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಸುತ್ತ ಭದ್ರತಾ ಬೇಲಿ ಅಳವಡಿಸಬೇಕೆಂದು ಯಡೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.








