ನಾಪೋಕ್ಲು ಜ.18 : ಜನಾಂಗಬಾಂಧವರು ಒಗ್ಗೂಡಲು ಕ್ರೀಡಾಕೂಟಗಳು ಸಹಕಾರಿ ಎಂದು ಕೊಳಕೇರಿ ಗ್ರಾಮದ ಕಾಫಿ ಬೆಳೆಗಾರ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಹೇಳಿದರು.
ಕುಂಜಿಲ ಗ್ರಾಮದ ನಾಲ್ನಾಡು ಶಿವಾಜಿ ಯೂತ್ಸ್ ವತಿಯಿಂದ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಕರು ದೇಹ ಮತ್ತು ಮನಸ್ಸನ್ನು ಶುಚಿಯಾಗಿಟ್ಟುಕೊಳ್ಳಬೇಕು. ಕುಡಿತದ ದಾಸರಾಗದೆ ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಹಕಾರ ನೀಡಿದರೆ ಕ್ರೀಡಾಕೂಟ ಯಶಸ್ವಿಯಾಗಲು ಸಾಧ್ಯ ಎಂದರು.
ಕುಂಜಿಲ ಕಕ್ಕಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಮಾತನಾಡಿ, ಕೊಡಗಿನ ಮೂಲ ನಿವಾಸಿಗಳಾದ ಕೆಂಬಟ್ಟಿ ಜನಾಂಗದ ಸಂಸ್ಕೃತಿ ಉತ್ತಮವಾಗಿದೆ. ಮೂಲ ಸಂಸ್ಕೃತಿಯನ್ನು ಮರೆಯುವುದು ಸರಿಯಲ್ಲ.ಸಂಸ್ಕೃತಿ ವಿಶೇಷವಾದದ್ದಾಗಿದ್ದು, ಮುಂದಿನ ಪೀಳಿಗೆಗೂ ಪರಿಚಯಿಸಬೇಕಿದೆ ಎಂದರು.
ದಿ ತಾಮರ ರೆಸಾರ್ಟ್ ನ ಸೀನಿಯರ್ ಮ್ಯಾನೇಜರ್ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ ಮಾತನಾಡಿ, ಕ್ರೀಡಾಕೂಟಗಳು ಕುಟುಂಬಗಳ ನಡುವೆ ಸಾಮರಸ್ಯ ಬೆಸೆಯುತ್ತದೆ. ಎಂದ ಅವರು ಮೂರು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟ ಪ್ರತಿ ವರ್ಷ ನಡೆಯುವಂತಾಗಲಿ. ಜನಾಂಗಬಾಂಧವರು ಪ್ರತಿಭೆಯನ್ನು ವ್ಯಕ್ತಪಡಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ಕಕ್ಕಬ್ಬೆ-ಕುಂಜಿಲ ಗ್ರಾ.ಪಂ ಅಧ್ಯಕ್ಷೆ ಪೊಂಗೇರ ಶಿಲ್ಪಾ ಲೋಕೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕುಂಜಿಲ- ಕಕ್ಕಬೆ, ನಾಲ್ನಾಡು ಶಿವಾಜಿ ಯೂತ್ ಕ್ಲಬ್ ಅಧ್ಯಕ್ಷ ಉತ್ತುಕುಟ್ಟಡ ನಿತಿನ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ಆರ್.ರವಿಕುಮಾರ್ , ಕಕ್ಕಬ್ಬೆ ಪ್ರೌಢಶಾಲೆಯ ಬಾತ್ಮಿದಾರರಾದ ಕಲಿಯಾಟಂಡ ಸುಧಾ ಗಣಪತಿ, ಗ್ರಾಮ ಆಡಳಿತಾಧಿಕಾರಿ ಜನಾರ್ಧನ್, ಕಾಫಿ ಬೆಳೆಗಾರ ಕಲಿಯಾಟಂಡ ಅರುಣ್, ಜನಪದ ತಜ್ಙ ಉತ್ತುಕುಟ್ಟಡ ತಿಮ್ಮಯ್ಯ , ನಮ್ಮುಡುಮಂಡ ಅಯ್ಯಪ್ಪ, ಶರತ್ , ದಿನು ಕುಟ್ಟಪ್ಪ, ಕಂದಾಯ ಇಲಾಖೆಯ ಸಿಬ್ಬಂದಿ ತಿಮ್ಮಣ್ಣ, ಎಮ್ಮೆಮಾಡು ಗ್ರಾ.ಪಂ ಸಿಬ್ಬಂದಿ ಪಾರ್ವತಿ, ಕಾಮಿನಿ, ಮನು ಬಿದ್ದಪ್ಪ, ಶಂಭು ಶಿವಾಜಿ ಯೂತ್ಸ್ನ ಪದಾಧಿಕಾರಿಗಳು ಹಾಗೂ ಇನ್ನಿತರ ಉಪಸ್ಥಿತರಿದ್ದರು. ರಾಹುಲ್ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.
ಕ್ರಿಕೆಟ್ ಪಂದ್ಯಾವಳಿಯನ್ನು ಅತಿಥಿಗಳು ಬ್ಯಾಟಿನಿಂದ ಚೆಂಡನ್ನು ಹೊಡೆಯುವುದರ ಮೂಲಕ ಉದ್ಘಾಟಿಸಿದರು. ಜ.21 ರಂದು ಸಮಾರೋಪಗೊಳ್ಳಲಿದೆ.
ವರದಿ : ದುಗ್ಗಳ ಸದಾನಂದ








