ವಿರಾಜಪೇಟೆ ಫೆ.1 NEWS DESK : ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದಲ್ಲಿ ಸುಮಾರು ವರ್ಷದ ಹಿಂದೆ ಸ್ವಂತ ಜಾಗ ಖರೀದಿಸಿ ಕೂಲಿ ಕೆಲಸ ಮಾಡಿಕೊಂಡು ತನ್ನ ಸ್ವಂತ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ ಬೆಟ್ಟ ಕುರುಬರ ಕುಟುಂಬಕ್ಕೆ ಸ್ಥಳೀಯ ನಿವಾಸಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್ ಮಾವೀಯತೆ ಮೆರೆದಿದ್ದಾರೆ.
ಬೆಟ್ಟ ಕುರುಬರ ಕಾಳ, ಪತ್ನಿ ಸುಮ, ಮಕ್ಕಳೊಂದಿಗೆ ಈ ಗುಡಿಸಲಿನಲ್ಲಿದ್ದುಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಇವರ ಮನೆಯ ದುಸ್ಥಿತಿಯನ್ನು ತಿಳಿದ ಬಿ.ಎಂ ಗಣೇಶ್ ಅವರು ತಮ್ಮ ಸ್ವಂತ ಹಣದಿಂದ ನಾಲ್ಕು ಕೊಠಡಿಗಳ ಒಂದು ಪುಟ್ಟ ಮನೆಯನ್ನು ಕಟ್ಟಿಸಿಕೊಟ್ಟರು. ನೂತನ ಮನೆಗೆ ಗಣಪತಿ ಹೋಮ ನಡೆಸಿ ಬಳಿಕ ರಿಬ್ಬನ್ ಕತ್ತರಿಸುವ ಮೂಲಕ ಗೃಹ ಪ್ರವೇಶ ನಡೆಸಿ ಕಾಳ ಅವರಿಗೆ ಮನೆ ಹಸ್ತಾಂತರಿಸಿದರು.
ಈ ಸಂದರ್ಭ ಮೆಚ್ಚುಗೆಯ ಮಾತನಾಡಿದ ಕಾಳ, ದಿನಗೂಲಿ ಕೆಲಸ ಮಾಡುತ್ತಾ ಸಾಗಿಸುತ್ತಿರುವ ನಮಗೆ ಸ್ವಂತ ಮನೆ ಕನಸಾಗಿತ್ತು. ಗಣೇಶ್ ಅವರ ಸಹಕಾರದಿಂದ ಸ್ವಂತ ಮನೆಯ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮನೆ ನಿರ್ಮಿಸಿಕೊಟ್ಟ ಬಿ.ಎಂ.ಗಣೇಶ್ ಮಾತನಾಡಿ ಕಾಳ ಅವರ ಮನೆ ನೋಡಿ ತುಂಬಾ ಬೇಸರವಾಯಿತು. ನಾವುಗಳು ಒಂದು ಕಾಲದಲ್ಲಿ ಹುಲ್ಲಿನ ಮನೆಯಲ್ಲಿ ಬಾಳಿ ಬದುಕಿದ್ದು ಇಂದು ಭಗವಂತ ನಮ್ಮನ್ನು ಸುಸ್ಥಿತಿಗೆ ತಂದಿದ್ದಾರೆ, ನಾನೇನು ಆಗರ್ಭ ಶ್ರೀಮಂತನಲ್ಲ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ. ಇನ್ನೂ ವಿದ್ಯುತ್ ಪೂರೈಕೆ ಮತ್ತು ಶೌಚಾಲಯದ ಅವಶ್ಯಕತೆ ಇದೆ. ಕಾಳ ಅವರ ಬಳಿ ಅಗತ್ಯವಾದ ದಾಖಲೆ ಇಲ್ಲದ ಕಾರಣ ಸ್ವಲ್ಪ ವಿಳಂಬವಾಗಿದೆ ಎಂದು ಗಣೇಶ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗಣೇಶ್ ಅವರ ಪತ್ನಿ, ಮಕ್ಕಳು ಸೇರಿದಂತೆ ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಮೋದ್, ಬೇಟೋಳಿ ಗ್ರಾಮ ಪಂಚಾಯಿತಿ ಅಧಿಕಾರಿ ಬಿ. ಮಣಿ ಸೇರಿದಂತೆ ಇತರರು ಇದ್ದರು.









