ಮಡಿಕೇರಿ ಫೆ.14 NEWS DESK : ಕೊಡಗು ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಆದ್ದರಿಂದ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ, ತಿದ್ದುಪಡಿ ಅರ್ಜಿ ಮತ್ತು ಹೆಸರು ಸೇರ್ಪಡೆಯ ಅರ್ಜಿಗಳ ವಿಲೇವಾರಿಗಾಗಿ ತಿಂಗಳಲ್ಲಿ ಕನಿಷ್ಠ 15 ದಿನಗಳನ್ನಾದರು ಮೀಸಲಿಡಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳು ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಕೊಡಗಿನಲ್ಲಿ ಕಳೆದ ಒಂದು ವರ್ಷದಿಂದ ಹೊಸ ಪಡಿತರ ಚೀಟಿ ನೀಡುವುದನ್ನೇ ನಿಲ್ಲಿಸಲಾಗಿದೆ. ಪಡಿತರ ಚೀಟಿಗಳ ತಿದ್ದುಪಡಿ, ಮೃತರ ಹೆಸರು ವಜಾಗೊಳಿಸುವುದು ಹಾಗೂ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಸೇರಿದಂತೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ಕಾರ್ಮಿಕ ವರ್ಗ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.
ಹೊಸ ಪಡಿತರ ಚೀಟಿಗಾಗಿ, ತಿದ್ದುಪಡಿಗಾಗಿ ಹಾಗೂ ಹೆಸರು ಸೇರ್ಪಡೆಗಾಗಿ ಅರ್ಜಿಗಳನ್ನು ಸಲ್ಲಿಸಲು ಸೈಬರ್ ಸೆಂಟರ್ಗಳಲ್ಲಿ ಕಾದು ಕುಳಿತು “ಸರ್ವರ್ ಇಲ್ಲ” ಎಂಬ ಕಾರಣದಿಂದ ಬೇಸರದಿಂದ ಹಿಂತಿರುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾರದಲ್ಲಿ ಒಂದು ದಿನ ಪಡಿತರ ಚೀಟಿಗಾಗಿ ಮೀಸಲಿಡುವುದೆಂದು ತಿಳಿಸಿ, ವಾರದಲ್ಲಿ ಯಾವುದೋ ಒಂದು ಗಂಟೆ ಕಾಲ ಮಾತ್ರ ಅರ್ಜಿಯ ಡಾಟಾಗಳು ತೆರೆದಿರಿವುದು ಕಂಡು ಬರುತ್ತಿದೆ. ಪ್ರತಿ ದಿನ ಬೆಳಗ್ಗಿನಿಂದ ಸಂಜೆಯವರೆಗೂ ಕಾರ್ಮಿಕರು ಎಲ್ಲಾ ಸೈಬರ್ ಸೆಂಟರ್ಗಳಿಗೆ ಅಲೆದಾಡುತ್ತಿದ್ದಾರೆ.
ಯಾವುದೋ ಸಮಯಕ್ಕೆ ಪಡಿತರ ಡಾಟಾ ತೆರೆದರೆ ಬಡವರು ಏನು ಮಾಡಬೇಕು ಎಂದು ಪ್ರಶ್ನಿಸಿದ ಪದಾಧಿಕಾರಿಗಳು, ಈ ಅವ್ಯವಸ್ಥೆಯ ಲಾಭವನ್ನು ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದಾರೆ, ದೊಡ್ಡ ಮೊತ್ತದ ಹಣವನ್ನು ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಬಡವರು ಹಾಗೂ ಕಾರ್ಮಿಕರಿಗಾಗಿ ಪಡಿತರ ಚೀಟಿ ಅರ್ಜಿ, ಹೆಸರು ಸೇರ್ಪಡೆ ಅರ್ಜಿಗಳ ಡಾಟಾವನ್ನು ತಿಂಗಳಲ್ಲಿ 15 ದಿನಗಳಾದರೂ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾಯ್ದಿರಿಸಬೇಕೆಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭ ಯೂನಿಯನ್ ನ ಜಿಲ್ಲಾಧ್ಯಕ್ಷ ಕೆ.ಹೆಚ್.ಅಣ್ಣ ಶರೀಫ್, ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್ ಹಾಗೂ ಕೋಶಾಧಿಕಾರಿ ಕೆ.ಎಂ.ಯೂಸುಫ್ ಹಾಜರಿದ್ದರು.









