ಮಡಿಕೇರಿ ಫೆ.27 NEWS DESK : ಮೈಸೂರು- ಕೊಡಗು ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಈ ಕೆಲಸವನ್ನು ಕಳೆದ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಯಾಕೆ ಮಾಡಲಿಲ್ಲ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್ ಪ್ರಶ್ನಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಭೂಮಿ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಬೇಕಾಗಿತ್ತು. ಆ ಮೂಲಕ ತಾವು ಕೊಡಗು ಕ್ಷೇತ್ರಕ್ಕೂ ಸಂಸದರು ಎನ್ನುವುದನ್ನು ಸಾಬೀತು ಪಡಿಸಬೇಕಾಗಿತ್ತು ಎಂದು ತಿಳಿಸಿದ್ದಾರೆ.
ಸುಮಾರು 9 ವರ್ಷಗಳ ಹಿಂದೆಯೇ ಕೊಡಗು ಜಿಲ್ಲೆಗೆ ರೈಲು ಮಾರ್ಗ ತರುವುದಾಗಿ ಭರವಸೆ ನೀಡಿದ್ದ ಸಂಸದರು ಇಲ್ಲಿಯವರೆಗೆ ಈ ಬಗ್ಗೆ ಇಚ್ಛಾಶಕ್ತಿಯನ್ನು ಪ್ರದರ್ಶಿಸಿಲ್ಲ. ಇದೀಗ ಲೋಕಸಭಾ ಚುನಾವಣಾ ಹಂತದಲ್ಲಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿ ಕಳೆದ 10 ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಕಡೆಗಣಿಸುತ್ತಲೇ ಬಂದಿರುವ ಸಂಸದರು, ಇದೀಗ ಚುನಾವಣಾ ಕಾಲದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ವನ್ಯಜೀವಿಗಳು ನಿರಂತರವಾಗಿ ದಾಳಿ ಮಾಡಿ ಮಾನವ ಜೀವಹಾನಿಯಾದಾಗ ಮತ್ತು ಅತಿವೃಷ್ಟಿ, ಅನಾವೃಷ್ಟಿಯಿಂದ ಕೃಷಿಕ ವರ್ಗ ಸಂಕಷ್ಟಕ್ಕೆ ಸಿಲುಕಿದಾಗ ತಿರುಗಿ ನೋಡದ ಸಂಸದರಿಗೆ ಈಗ ಕೊಡಗಿನಲ್ಲಿ ಸಕ್ರಿಯವಾಗಲು ಹೇಗೆ ಸಮಯ ಸಿಕ್ಕಿತು ಎಂದು ಉಸ್ಮಾನ್ ಟೀಕಿಸಿದ್ದಾರೆ.
ಎರಡು ಬಾರಿ ಗೆದ್ದು ಬಂದ ಸಂಸದರು ಕೊಡಗು ಜಿಲ್ಲೆಗೆ ವಿಶೇಷವಾಗಿ ನೀಡಿದ ಕೊಡುಗೆ ಏನು ಎನ್ನುವುದನ್ನು ಮೊದಲು ಬಹಿರಂಗಪಡಿಸಲಿ. ಕಳೆದ 9 ವರ್ಷಗಳಿಂದ ರೈಲು ಮಾರ್ಗವನ್ನು ತರಲಾಗದ ಅಸಹಾಯಕ ಸ್ಥಿತಿಗೆ ಕಾರಣ ಏನು ಎನ್ನುವುದನ್ನು ಜಿಲ್ಲೆಯ ಜನತೆಗೆ ತಿಳಿಸಲಿ. ಕಾಫಿ ಬೆಳೆಗಾರರು ಹಾಗೂ ತೋಟದ ಕಾರ್ಮಿಕರ ಪರವಾಗಿ ಅಧಿವೇಶನದಲ್ಲಿ ಯಾವ ರೀತಿಯ ವಿಚಾರ ಮಂಡನೆ ಮಾಡಿದ್ದಾರೆ ಎನ್ನುವುದನ್ನು ವಿವರಿಸಲಿ. ಇಷ್ಟು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಸದರು ಎಷ್ಟು ಸಾರ್ವಜನಿಕ ಸಭೆಗಳನ್ನು ನಡೆಸಿದ್ದಾರೆ ಮತ್ತು ಜನಾಭಿಪ್ರಾಯ ಸಂಗ್ರಹಿಸಿ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ ಎನ್ನುವುದನ್ನು ತೆರೆದ ಮನಸ್ಸಿನಿಂದ ಹೇಳಲಿ ಎಂದು ಅವರು ಒತ್ತಾಯಿಸಿದ್ದಾರೆ.
ಕೊಡಗಿನ ಮತದಾರರು ಪ್ರಜ್ಞಾವಂತರಾಗಿದ್ದು, ಜಾಗೃತರಾಗಿದ್ದಾರೆ. ಈ ಬಾರಿಯೂ ರೈಲು ಮಾರ್ಗದ ಆಮಿಷವೊಡ್ಡಿದರೆ ಸಂಸದರ ಪರವಾಗಿ ಮತ ಚಲಾವಣೆಯಾಗುವುದಿಲ್ಲ ಎಂದು ಉಸ್ಮಾನ್ ಅಭಿಪ್ರಾಯಪಟ್ಟಿದ್ದಾರೆ.










