ಮಡಿಕೇರಿ ಮಾ.28 NEWS DESK : ವಿಧಾನಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರ ಕೆಲಸ ಮಾಡಿರುವುದು ನಿಜ, ಆದರೆ, ಎಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ, ಇಂದಿಗೂ ಜೆಡಿಎಸ್ ಕಾರ್ಯಕರ್ತನಾಗಿದ್ದು, ನನ್ನ ಧೋರಣೆ ತಟಸ್ಥವಾಗಿದೆ ಎಂದು ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಅಭಿವೃದ್ಧಿ ಕಾರ್ಯಗಳು ಸಾಗದ ಕಾರಣ ಅಂದು ಕಾಂಗ್ರೆಸ್ನೊಂದಿಗೆ ಕೈಜೋಡಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇದರ ಭಾಗವಾಗಿ ಅಂದು ಡಿ.ಕೆ.ಶಿವಕುಮಾರ್ ಅವರು ಕಚೇರಿಗೆ ಕರೆಸಿ, ಶಾಲು ಹೊದಿಸಿ, ನೀವು ಏಕಾಏಕಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೀರಿ ಎಂದು ಹೇಳಿದರು. ನಾವು ಏನೂ ಉತ್ತರ ನೀಡಲಾಗಲಿಲ್ಲ. ನಂತರ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪರ ಕೆಲಸ ಮಾಡಿದ್ದೇವೆ. ಇದರಿಂದ ಜೆಡಿಎಸ್ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದೇನೆ. ಆದರೆ, ಇಂದಿಗೂ ನಾನು ಜೆಡಿಎಸ್ ನ ಕಾರ್ಯಕರ್ತನಾಗಿ ಮುಂದುವರೆದಿದ್ದು, ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದರು.
ಇತ್ತೀಚೆಗೆ ನಾನು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಈ ಹಿಂದೆ ಕಾಂಗ್ರೆಸ್ ಸೇರ್ಪಡೆ ಎಂದು ಚುನಾವಣೆ ಸಂದರ್ಭ ಕೆಲಸ ಮಾಡಿಸಿಕೊಂಡಿದ್ದಾರೆ, ನಂತರ ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಎಂದಿಗೂ ಎಲ್ಲರನ್ನು ಹೊಂದಾಣಿಕೆಯಿಂದ ಮುನ್ನಡೆಸುವುದಿಲ್ಲ, ಆ ಪಕ್ಷಕ್ಕೆ ಒಟ್ಟು ಸೇರಿಸುವ ಶಕ್ತಿಯೂ ಇಲ್ಲ ಎಂದು ಗಣೇಶ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಾಜಿ ಸಂಘಟನಾ ಕಾರ್ಯದರ್ಶಿ ಗಣೇಶ್, ಮಾಜಿ ಖಜಾಂಚಿ ಡೆನ್ನಿ ಬರೋಸ್, ಮಾಜಿ ಕಾರ್ಯದರ್ಶಿ ಸುನೀಲ್ ಹಾಗೂ ಮಾಜಿ ಸದಸ್ಯ ಜಗನ್ ಉಪಸ್ಥಿತರಿದ್ದರು.









