ಕುಶಾಲನಗರ ಮಾ.28 NEWS DESK : ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದುಬಾರೆ ಸಾಕಾನೆಗಳ ಮಾವುತರು ಮತ್ತು ಕಾವಾಡಿಗ ಸಿಬ್ಬಂದಿಗಳು ಗುರುವಾರ ಶಿಬಿರದಲ್ಲಿ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ತಮ್ಮನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿದ್ದಾರೆ. ಶಿಬಿರದಲ್ಲಿ ಕನಿಷ್ಠ ಸೇವೆ ಸಲ್ಲಿಸಿದ ವ್ಯಕ್ತಿಗೆ ಅನುಭವ ಇಲ್ಲದಿದ್ದರೂ ಶಿಬಿರದ ಜಮೇದಾರ ಹುದ್ದೆಗೆ ನಿಯೋಜನೆ ಮಾಡಿರುವ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಮೂರು ದಿನಗಳೊಳಗೆ ಸಮಸ್ಯೆ ಇತ್ಯರ್ಥ ಗೊಳ್ಳದಿದ್ದಲ್ಲಿ ದುಬಾರೆ ಸಾಕಾನೆ ಶಿಬಿರದ ಸಿಬ್ಬಂದಿಗಳು ಆನೆಗಳ ಸಹಿತ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ದುಬಾರೆ ಶಿಬಿರದಲ್ಲಿ 23 ಆನೆಗಳು ಇದ್ದು ಅವುಗಳ ಮೇಲ್ವಿಚಾರಣೆಗೆ 27 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ಇನ್ನೂ ಖಾಯಂಗೊಳಿಸಿಲ್ಲ. ದಸರಾ ಸಂದರ್ಭ ನೀಡಿದ ಭರವಸೆ ಇನ್ನೂ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಹತೆಯ ಸಬೂಬು ಹೇಳಿಕೊಂಡು ಅಧಿಕಾರಿಗಳು ಅನುಭವವಿಲ್ಲದ ಜನರಿಗೆ ಆನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ನೇರವಾಗಿ ಆಯ್ಕೆ ಮಾಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಅನುಭವದಿಂದ ಮಾತ್ರ ಆನೆಗಳ ನಿರ್ವಹಣೆ ಸಾಧ್ಯವೇ ಹೊರತು ಶಿಕ್ಷಣದಿಂದ ಅಲ್ಲ ಎಂದು ಹಿರಿಯ ಮಾವುತರಾದ ಡೋಬಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಬಿರದಲ್ಲಿ ಸೇವೆ ಸಲ್ಲಿಸಿದ ಮಾವುತರು ಕಾವಾಡಿಗರನ್ನು ಹೊರತುಪಡಿಸಿ ಇತರರಿಗೆ ಆನೆ ನಿರ್ವಹಣೆ ಕೆಲಸ ನೀಡಿದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಮುಂದಿನ ಮೂರು ದಿನಗಳ ನಂತರ ಶಿಬಿರದ ಆನೆಗಳೊಂದಿಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಶಿಬಿರಕ್ಕೆ ಭೇಟಿ ನೀಡಿ ಈ ಬಗ್ಗೆ ಸಮಗ್ರ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುವುದರೊಂದಿಗೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಭರವಸೆ ನೀಡಿದರು.








