ಸೋಮವಾರಪೇಟೆ ಮೇ 4 NEWS DESK : ಸೋಮವಾರಪೇಟೆ ತಾಲ್ಲೂಕು ಮೊಗೇರ ಯುವ ವೇದಿಕೆ ವತಿಯಿಂದ ಪಟ್ಟಣದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಅಯೋಜಿಸಿರುವ ಮೊಗೇರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯ ಪಿ.ಎಂ. ರವಿ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಪದ್ದತಿ-ಪರಂಪರೆಯನ್ನು ಉಳಿಸಿಕೊಂಡು ಮುಂದೆ ಸಾಗಲು ಸಮಾಜ ಬಾಂಧವರ ಒಗ್ಗೂಡುವಿಕೆ ಅಗತ್ಯ. ಕ್ರೀಡೆಯಿಂದ ಸಂಘಟನೆ ಸಾಧ್ಯ. ಮೊಗೇರ ಸಮಾಜವು ಜಿಲ್ಲೆಯಲ್ಲಿ 2003ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದೆ ಎಂದರು.
ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕ ಮೊಗೇರ ಸಮಾಜ ಬಾಂಧವರಿದ್ದು, ಇನ್ನಷ್ಟು ಒಗ್ಗಟ್ಟು ಸಾಧಿಸಬೇಕಿದೆ. ಸಮುದಾಯದ ಯುವ ಜನಾಂಗ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಬೇಕು. ಗ್ರಾಮ ಮಟ್ಟದಲ್ಲಿ ಸಂಘಟನೆಗಳು ಬಲಗೊಳ್ಳಬೇಕು ಎಂದು ರವಿ ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಕೆ.ಎ. ಯಾಕೂಬ್, ಹಲವಷ್ಟು ವರ್ಷಗಳಿಂದ ಲೈನ್ಮನೆಗಳಲ್ಲಿಯೇ ನೆಲೆಸಿರುವ ಮೊಗೇರ ಸಮುದಾಯದವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆಯವರು ಶಾಸಕರು, ಸರ್ಕಾರದ ಗಮನ ಸೆಳೆಯಬೇಕೆಂದರು.
ಮೊಗೇರ ಯುವ ವೇದಿಕೆ ಅಧ್ಯಕ್ಷ ಪಿ.ಬಿ. ಸುರೇಶ್, ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಮೊಗೇರ ಸಮಾಜದ ಗೌರವಾಧ್ಯಕ್ಷ ಪಿ.ಕೆ. ಚಂದ್ರು, ಉಪಾಧ್ಯಕ್ಷ ವೆಂಕಪ್ಪ, ಜಿಲ್ಲಾ ಕ್ರೀಡಾ ಸಮಿತಿ ಅಧ್ಯಕ್ಷ ಎಂ.ಜಿ. ಚಂದ್ರ, ಖಜಾಂಚಿ ದೇವರಾಜ್ ಇದ್ದರು.








