ಮಡಿಕೇರಿ ಜೂ.20 NEWS DESK : ಕುಡಗೋಲು ಕಣದ ರೋಗದ ಬಗ್ಗೆ ಸಾರ್ವಜನಿಕರು ಹಾಗೂ ಗಿರಿಜನರು ಅರಿವು ಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ, ಮಡಿಕೇರಿ, ಬೆಂಗಳೂರು ಭಾರತೀಯ ತೈಲ ನಿಗಮ ಭಾರತೀಯ ವಿಜ್ಞಾನ ಸಂಸ್ಥೆ, ಪ್ರಾಜೆಕ್ಟ್ ಚಂದನ, ರಾಜ್ಯ ರಕ್ತಕೋಶ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿಶ್ವ ಕುಡಗೋಲು ಕಣ ರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಹಾಗೂ ಗಿರಿಜನರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕೆ ಎಲ್ಲಾ ಇಲಾಖೆಗಳ ಸಹಕಾರ ಅತೀ ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಸಿಕಲ್ಸೆಲ್ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಡಗೋಲು ಕಣ ರೋಗವು ಅನುವಂಶಿಕ ಕಾಯಿಲೆಯಾಗಿದ್ದು, ಇದರಲ್ಲಿ ಕೆಂಪು ರಕ್ತಕಣಗಳು ಕುಡಗೋಲು ಆಕಾರದ ರೂಪವನ್ನು ಪಡೆದು ದೇಹದಲ್ಲಿ ರಕ್ತದ ಚಲನೆಯನ್ನು ನಿಧಾನಗೊಳಿಸಿ, ನಿರ್ಭಂಧಿಸಿ, ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಕಾಯಿಲೆಯು ಹುಟ್ಟಿನಿಂದ ಸಾಯುವವರಗೆ ಕಾಡುವ ರೋಗವಾಗಿದ್ದು, ಈ ರೋಗ ಹೊಂದಿದವರ ಜೀವಿತಾವಧಿ ಇನ್ನಿತರ ಜನಸಾಮಾನ್ಯರಿಗಿಂತ ಕಡಿಮೆ. ಸರಾಸರಿ 42 ರಿಂದ 48 ವರ್ಷ ಬದುಕಬಹುದು ಎಂದು ತಿಳಿಸಿದರು.
ಆಯಾಸ, ಬ್ಯಾಕ್ಟೀರಿಯಾದ ಸೋಂಕುಗಳು, ಪಾಶ್ರ್ವವಾಯು, ಕಣ್ಣಿನ ಹಾನಿ, ಉರಿಯೂತ, ವಾಸಿಯಾಗದ ಕಾಲಿನ ಹುಣ್ಣು, ತೀವ್ರ ಮೂಳೆನೋವು, ಪದೇಪದೇ ಜ್ವರ, ರಕ್ತಹೀನತೆ, ವಿಳಂಬಿತ ಬೆಳವಣಿಗೆ ಅಥವಾ ಪ್ರೌಢಾವಸ್ಥೆ ಈ ಕಾಯಿಲೆಯ ಲಕ್ಷಣಗಳು ಎಂದು ತಿಳಿಸುತ್ತಾ, ಕಾಯಿಲೆಯು ಹರಡುವ ಬಗೆಯನ್ನು ಸವಿವರವಾಗಿ ತಿಳಿಸಿಕೊಟ್ಟರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 58 ಸಾವಿರಕ್ಕೂ ಹೆಚ್ಚು ಗಿರಿಜನರಿದ್ದು, ಕೊಡಗು ಜಿಲ್ಲೆಯಲ್ಲಿ ಆದಿವಾಸಿ ಬುಡಕಟ್ಟು ಜನಾಂಗದ 10,263 ಜನರನ್ನು ನೋಂದಣಿ ಮಾಡಿದ್ದು, ಇವರಲ್ಲಿ 10,224 ಜನರನ್ನು ತಪಾಸಣೆ ಮಾಡಲಾಗಿದೆ. ಇವರಲ್ಲಿ 453 ಕ್ಯಾರಿಯರ್ಗಳು ಕಂಡುಬಂದಿದ್ದು, 34 ಪ್ರಕರಣಗಳು ಕುಡುಗೋಲು ಕಣದ ಕಾಯಿಲೆ ಪ್ರಕರಣಗಳೆಂದು ದೃಢಪಟ್ಟಿರುತ್ತವೆ ಎಂದರು.
ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಸಂಬಂಧಿಕರಿಗೆ ಈ ಕಾಯಿಲೆ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಿಬ್ಬಂಧಿಯವರಿಂದ ರಕ್ತಪರೀಕ್ಷೆ ಮಾಡಿಸಿ ಪತ್ತೆಹಚ್ಚಬಹುದು. ರೋಗ ಕಂಡುಬಂದಲ್ಲಿ ಎಲ್ಲಾ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರನ್ನು ರಕ್ತಪರೀಕ್ಷೆಗೆ ಒಳಪಡಿಸತಕ್ಕದ್ದು. ಕುಡಗೋಲು ಕಣದ ಕಾಯಿಲೆಯನ್ನು ಚಿಕಿತ್ಸೆ ಪಡೆಯಲು ನಿರ್ಲಕ್ಷಿಸಿದಲ್ಲಿ ಜೀವಕ್ಕೆ ಅಪಾಯವಾಗಬಹುದು ಎಂದು ತಿಳಿಸಿದರು.
ಗಿರಿಜನ ಅಭಿವೃದ್ಧಿ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ಮಾತನಾಡಿ, ಜಿಲ್ಲೆಯಲ್ಲಿ 58 ಸಾವಿರಕ್ಕೂ ಹೆಚ್ಚಿನ ಗಿರಿಜನರಿದ್ದು, ಇವರುಗಳಿಗೆ ಕುಡಗೋಲು ಕಣ ರೋಗ ತಪಾಸಣೆ ಮಾಡಿಸಿಕೊಳ್ಳಲು ಸಹಕರಿಸಲು ಗಿರಿಜನ ಮುಖಂಡರಲ್ಲಿ ಮನವಿ ಮಾಡಿದರು ಹಾಗೂ ಇಲಾಖೆ ವತಿಯಿಂದ ಗಿರಿಜನರ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಸಭೆಗೆ ಆಗಮಿಸಿದ್ದ ಗಿರಿಜನ ಸಮುದಾಯದ ಮುಖಂಡರುಗಳಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಂಕಜಾ, ವನಬನ ವಿಕಾಸ ಕೇಂದ್ರ ಹಾಗೂ ಲ್ಯಾಂಪ್ ನಿರ್ದೇಶಕರಾದ ಪುಷ್ಪ ಜೆ.ಆರ್, ಗಿರಿಜನ ಮುಖಂಡರಾದ ರಾಜೀವ್, ನಿತಿನ್ ಸಭೆಯಲ್ಲಿ ಕುಡಗೋಲು ಕಣ ರೋಗ ತಪಾಸಣೆಗೆ ಸಮುದಾಯದಿಂದ ಸಹಕಾರ ನೀಡುವುದಾಗಿ ತಿಳಿಸಿದರು.
ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲ ಕೆ.ಜಿ ಅವರು ಮಾತನಾಡಿ ಜಿಲ್ಲೆಯಲ್ಲಿ ವಿಕಲಚೇತನರ ದೃಢೀಕರಣಕ್ಕೆ ಹಾಗೂ ಇಲಾಖೆ ವತಿಯಿಂದ ಲಭಿಸುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಪ್ರಾಜೆಕ್ಟ್ ಚಂದನ ಭಾರತೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಡಾ.ಕಾವೇರಿ ಅವರು ಮಾತನಾಡಿ 5 ವರ್ಷದಿಂದ 45 ವರ್ಷದೊಳಗಿನ ಎಲ್ಲಾ ಗಿರಿಜನರು ತಪ್ಪದೇ ಕುಡುಗೋಲು ಕಣರೋಗದ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಾರಂಭದಲ್ಲಿಯೇ ರೋಗ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸುತ್ತಾ, ಚಂದನ ಪ್ರಾಜೆಕ್ಟ್ ಬಗ್ಗೆ ಸವಿವರವಾಗಿ ತಿಳಿಸಿದರು.
ವಿರಾಜಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್, ಆರ್ಜಿ ಗ್ರಾ.ಪಂ.ಅಧ್ಯಕ್ಷರಾದ ಫಾತೀಮಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಕಾಂತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್. ಪಾಲಾಕ್ಷ, ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಗೂ 50 ಜನ ಗಿರಿಜನ ಮುಖಂಡರು ಸೇರಿದಂತೆ ಇತರರು ಇದ್ದರು. 










