
ಮಡಿಕೇರಿ ಜೂ.26 NEWS DESK : ಮಲ್ಮ ಬೆಟ್ಟ ಸಮೀಪದ ಜಾಗದಲ್ಲಿ ನಡೆದಿರುವ ಮರಗಳ ಹನನ ಮತ್ತು ಪರಿಸರ ಹಾನಿಯ ವಿರುದ್ಧ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಹೋರಾಟವನ್ನು ರೂಪಿಸುವುದಾಗಿ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಅವರು ಶ್ರೀ ಇಗ್ಗುತ್ತಪ್ಪ ದೇವರ ನೆಲೆ ಕೊಡವರ ಹಾಗೂ ಕೊಡವ ಮೂಲ ನಿವಾಸಿಗಳ ಆಸ್ಮಿತೆ, ನಂಬಿಕೆ ಮತ್ತು ಸಂಸ್ಕøತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಪವಿತ್ರ ಸ್ಥಳವಾಗಿದೆ. ದೇವಾಲಯ ವ್ಯಾಪ್ತಿಯ ಮಲ್ಮ ಬೆಟ್ಟ ಪ್ರದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಕೊಡವ ಪರಂಪರೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಮರಗಳು, ಬೆತ್ತ ಮತ್ತಿತರ ಸಸ್ಯ ರಾಶಿಗಳನ್ನು ಕಡಿಯಲಾಗಿದ್ದು, ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯ ಜನರು ಸ್ವಂತ ಬಳಕೆಗಾಗಿ ಸಣ್ಣ ಮರಗಳನ್ನು ಕಡಿದರೂ ತಕ್ಷಣ ಪ್ರಕರಣ ದಾಖಲಿಸುವ ಅರಣ್ಯ ಅಧಿಕಾರಿಗಳು ಈ ಪ್ರಕರಣದಲ್ಲಿ ಮೌನ ವಹಿಸಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಅರಣ್ಯ ಪ್ರದೇಶದಲ್ಲಿ ಅಥವಾ ಸಂರಕ್ಷಿತ ಪ್ರದೇಶದಲ್ಲಿ ಮರಗಳು, ಬೆತ್ತ ಮತ್ತಿತರ ಅರಣ್ಯ ಸಂಪತ್ತನ್ನು ಅನುಮತಿಯಿಲ್ಲದೆ ಕಡಿಯುವುದು, ನಾಶಪಡಿಸುವುದು ಅಥವಾ ಸಾಗಾಟ ಮಾಡುವುದು ಕಾನೂನುಬಾಹಿರವಾಗಿದೆ. ಇದೇ ಪ್ರದೇಶದಲ್ಲಿ ಬಂಡೆಗಳನ್ನು ಒಡೆದು ಭೂಮಿಯ ಸ್ವರೂಪವನ್ನು ಬದಲಾಯಿಸಿರುವುದು ಕೂಡ ಕಂಡು ಬಂದಿದ್ದು ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸೂಕ್ತ ಪರವಾನಗಿ ಪಡೆಯಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಅನುಮತಿ ಇಲ್ಲದೆ ಕಾಮಗಾರಿ ನಡೆಸಲಾಗುತ್ತಿದ್ದರೆ, ಕಣ್ಣುಮುಚ್ಚಿ ಕುಳಿತಿರುವುದರ ಹಿಂದಿನ ಕಾರಣವೇನು ಮತ್ತು ಪರವಾನಗಿ ನೀಡಿದ್ದರೆ, ಯಾವ ಕಾನೂನಿನಡಿಯಲ್ಲಿ ನೀಡಿದ್ದೀರ ಎಂದು ಇಲಾಖೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಅಕ್ರಮ ಕಾಮಗಾರಿಗಳ ವಿರುದ್ಧ ಸ್ಥಳೀಯ ಜನರು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ತಮ್ಮ ಆತಂಕ ಮತ್ತು ಆಕ್ಷೇಪಣೆಗಳನ್ನು ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಸ್ಥಳೀಯರ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದರು. ಸೂಕ್ಷ್ಮ ಪರಿಸರ ಪಶ್ಚಿಮಘಟ್ಟ ಪ್ರದೇಶದಲ್ಲಿ ಮರಗಳನ್ನು ಕಡಿಯಲು, ಬೆಟ್ಟಗುಡ್ಡಗಳನ್ನು ಕೊರೆಯಲು ಅಥವಾ ಇನ್ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಬಳಸಲು ಕಾನೂನು ಪ್ರಕಾರ ಅನುಮತಿ ಇದೆಯೇ ಎಂದು ಮಾಧ್ಯಮದ ಮೂಲಕ ಜಿಲ್ಲಾಧಿಕಾರಿಗಳಿಂದ ಸ್ಪಷ್ಟ ಸಂದೇಶವನ್ನು ಬಯಸಿದ್ದೆವು. ಆದರೆ ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳು ಈ ವಿಚಾರದ ಬಗ್ಗೆ ಮಾಹಿತಿಯನ್ನು ನೀಡಿಲ್ಲ ಎಂದು ರಾಜೀವ್ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಕೊಡವರ ಭಾವನೆಗೆ ವಿರುದ್ಧವಾಗಿ ಮಲ್ಮ ಬೆಟ್ಟ ಸಮೀಪ ನಡೆದಿರುವ ಪರಿಸರ ಹಾನಿಯ ಕುರಿತು ಜಿಲ್ಲೆಯ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಕೂಡ ಗಮನ ಹರಿಸಿ ಕ್ರಮಕ್ಕೆ ಮುಂದಾಗಬೇಕು. ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಅಚ್ಚಾಂಡಿರ ಕುಶಾಲಪ್ಪ, ಕಾರ್ಯದರ್ಶಿ ಅಣ್ಣಿರ ಹರೀಶ್ ಮಾದಪ್ಪ, ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ ಹಾಗೂ ಪ್ರಮುಖರಾದ ಅಪ್ಪಂಡೇರಂಡ ಯಶವಂತ್ ಉಪಸ್ಥಿತರಿದ್ದರು.









