
ಮಡಿಕೇರಿ ಜೂ.22 NEWS DESK : ಬೆಲೆ ಏರಿಕೆಯ ನೆಪವೊಡ್ಡಿ ವಿರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಮತ್ತು ಜನಪ್ರಿಯ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಗುರಿಯಾಗಿಸಿದ ಕೀಳು ಮಟ್ಟದ ರಾಜಕಾರಣವಾಗಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿದ ಬಿಜೆಪಿಯ ವರ್ತನೆ ಖಂಡನೀಯವೆAದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ದುರಾಡಳಿತದ ಫಲವಾಗಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡವರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ನಿತ್ಯ ಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಬಿಜೆಪಿ 5 ಪ್ರಮುಖ ಗ್ಯಾರಂಟಿಗಳ ಮೂಲಕ ಜನಪ್ರಿಯತೆ ಗಳಿಸಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಅರ್ಥಹೀನ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ರಾಜ್ಯ ಸರಕಾರದ ಗ್ಯಾರಂಟಿಗಳು ವರದಾನವಾಗಿದೆ. ಜನ ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ಪಡೆದು ಸಂತೃಪ್ತಿಯ ಜೀವ ಸಾಗಿಸುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ ಜನಪರ ಪ್ರತಿಭಟನೆಯ ಮುಖವಾಡ ತೊಟ್ಟು ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿಯವರಿಗೆ ನಿಜವಾಗಿಯೂ ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಶೇ.25 ರಷ್ಟು ಇಳಿಕೆ ಮಾಡಿಸಲಿ ಎಂದು ಹಂಸ ಸವಾಲೆಸೆದಿದ್ದಾರೆ.
ವಿರಾಜಪೇಟೆಯ ಪ್ರತಿಭಟನೆ ಸಂದರ್ಭ ರಾಜಕೀಯ ದುರುದ್ದೇಶದಿಂದ ಯಾವುದೇ ತಪ್ಪು ಮಾಡದ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸಲಾಗಿದೆ. ಈ ರೀತಿಯ ಧೋರಣೆಗಳಿಂದ ಪೊನ್ನಣ್ಣ ಅವರ ರಾಜಕೀಯ ಶಕ್ತಿಯನ್ನು ಕುಂದಿಸಬಹುದೆನ್ನುವ ಭ್ರಮೆಯಲ್ಲಿ ಬಿಜೆಪಿ ಇದೆ. ಆದರೆ ವಿರಾಜಪೇಟೆ ಕ್ಷೇತ್ರದ ಸಮಸ್ತ ಜನತೆ ಪೊನ್ನಣ್ಣ ಅವರ ಶಕ್ತಿಯಾಗಿ ಜೊತೆಗಿದ್ದಾರೆ.
ಇನ್ನಾದರೂ ಪೊನ್ನಣ್ಣ ಅವರನ್ನು ಗುರಿ ಮಾಡುವುದನ್ನು ಬಿಜೆಪಿಯವರು ಬಿಡಲಿ. ಇಲ್ಲದಿದ್ದರೆ ಕ್ಷೇತ್ರದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಧಿಕಾರವಿಲ್ಲದೆ ಹತಾಶಗೊಂಡಿರುವ ಬಿಜೆಪಿ ಸರಣಿ ಪ್ರತಿಭಟನೆಗಳ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಹಂಸ ಟೀಕಿಸಿದ್ದಾರೆ.








