
ಮಡಿಕೇರಿ ಜು.23 NEWS DESK : ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ರ ಬಜೆಟ್ ಮಂಡನೆ ಮಾಡಿದ್ದು, ಇದು ದೇಶದ ಬಜೆಟ್ ಅಲ್ಲ. ಬದಲಿಗೆ ಎರಡು ರಾಜ್ಯಗಳನ್ನು ಕೇಂದ್ರೀಕರಿಸಿದ ಋಣ ಸಂದಾಯದ ಬಜೆಟ್ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಟೀಕಿಸಿದ್ದಾರೆ.
ಎನ್ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ ಬಿಹಾರದ ಜೆಡಿಯು ಮತ್ತು ಆಂಧ್ರ ಪ್ರದೇಶದ ಟಿಡಿಪಿಯ ಋಣ ತೀರಿಸಲು ದೇಶದ 140 ಕೋಟಿ ಜನರ ತೆರಿಗೆ ಹಣವನ್ನು ಬಳಕೆ ಮಾಡಲಾಗಿದೆ. ಕರ್ನಾಟಕ ರಾಜ್ಯವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಯಡಿ ಪ್ರತಿಯೊಂದು ರಾಜ್ಯವನ್ನು ಸಮಾನವಾಗಿ ಕಾಣುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ. ಆದರೆ 26 ಸಾವಿರ ಕೋಟಿ ರೂ. ಬಿಹಾರ ರಾಜ್ಯಕ್ಕೆ ಮತ್ತು 15 ಸಾವಿರ ಕೋಟಿ ರೂ.ಗಳನ್ನು ಆಂಧ್ರ ಪ್ರದೇಶಕ್ಕೆ ಮೀಸಲಿಟ್ಟು, ಇತರ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತಾಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರ್ಕಾರ ಕಡೆಗಣಿಸಿರುವುದು ಸ್ಪಷ್ಟವಾಗಿದೆ. ಅತಿವೃಷ್ಟಿಯಿಂದ ರಾಜ್ಯ ತತ್ತರಿಸಿ ಹೋಗಿದೆ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ವಿಶೇಷ ಪ್ಯಾಕೆಜ್ ಘೋಷಿಸಬಹುದೆನ್ನುವ ನಿರೀಕ್ಷೆ ಇತ್ತು. ಪ್ರತಿ ಬಾರಿ ಅತಿ ಹೆಚ್ಚಿನ ಲೋಕಸಭಾ ಸದಸ್ಯರನ್ನು ಬಿಜೆಪಿ ಪಕ್ಷದಿಂದ ರಾಜ್ಯದ ಜನತೆ ಆರಿಸಿ ಕಳುಹಿಸುತ್ತಿದ್ದರೂ ಎನ್.ಡಿ.ಎ ಸರ್ಕಾರ ಮಾತ್ರ ಅನ್ಯಾಯ ಮಾಡುತ್ತಲೇ ಬರುತ್ತಿದೆ.
ಜಿಎಸ್ಟಿ ಹಂಚಿಕೆಯಲ್ಲಿಯೂ ರಾಜ್ಯದ ಪಾಲಿನ ಹಣ ಕಡಿತಗೊಳಿಸಿ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡಿದೆ ಎಂದು ಧರ್ಮಜ ಉತ್ತಪ್ಪ ಆರೋಪಿಸಿದ್ದಾರೆ.







